Thursday 25 February 2021

A soundless noise

ಯಾರ ಜೊತೆ ಮಾತನಾಡಲಿ ನಾನು ಯಾರ ಜೊತೆ?  ಮಾತನಾಡಲು ಇರುವರು ಹಲವಾರು. ಅವರೊಂದಿಗೆ ಮಾತನಾಡಲು ಮಾತಿಲ್ಲ ನನ್ನ ಬಳಿ. ಹೇಳಬೇಕಿರುವುದೆಲ್ಲ ನಿನಗೆ. ಮಾತನಾಡಲು ಬೇಕಿರುವವನು ನೀನೊಬ್ಬನೇ. ಕೀಳಿಸಿಕೊಳ್ಳ ಬೇಕಿರುವುದು ನೀ ತಾನೇ? ಏತಕ್ಕಾಗಿ ಕಾಡಿಸುವೆ, ಕಾಯಿಸುವೆ, ನೋಯಿಸುವೆ? ಅಂದು ನೀ ಕೇಳಿದ್ದೆ "ಏನು ಉಡುಗರೇ ಬೇಕೆಂದು", ನ ಹೇಳಿದ್ದೆ "ಕೊಡು ನಿನ್ನ ಸ್ವಲ್ಪ ಸಮಯವ ನನಗೆಂದು", ''ನನ್ನ ಎಲ್ಲ ಸಮಯವೂ ನಿನಗೆಯಲ್ಲವೇ"ಅಂದ್ದಿದ್ದೆ ನೀನು. ಈಗ ೧ ನಿಮಿಷವೂ ನನ್ನ ಮಾತ ಕೇಳಲು ಸಮಯವಿಲ್ಲ ನಿನಗೆ. ಅಥವಾ ಮನಸೇ ಇಲ್ಲವೇ? ದಿನಕ್ಕೆ ಆಗುವುದೇ ೪ ಭೇಟಿ. ತಿಂಡಿ, ಊಟ, ಕಾಫಿ, ನಿದ್ದೆ.! ತಿನ್ನುವಾಗಲು ಮೊಬೈಲ್ ಫೋನ್ ಬೇಕು. ಕಾಫಿ ಸಮಯದಿ ಅಮ್ಮ ಅಜ್ಜಿ ಸೊಸೆ ಸಾಕು. ಮಲುಗುವಾಗ ಒಂದು ಚೆಸ್ ಆಟ. ಜೊತೆಯಲ್ಲಿ ಸುಮ್ಮನೆ ಕುಳಿತಿರಬೇಕು ನಾನು. ಕೂದಲಿಗೆ ಎಣ್ಣೆ ಹಾಕುವುದೊಂದೇ ನೆನಪು, ಮರುಗಳಿಗೆಯಲ್ಲಿ ನಿನ್ನ ಗೊರಕೆಯ ಇಂಪು.  


 

Sunday 21 February 2021

ಆಶ್ಚರ್ಯ ಹಾಗು ಕೋಪ

 ಆಶ್ಚರ್ಯ ಹಾಗು ಕೋಪ ಎರೆಡು ನನ್ನಮ್ಮನ ಮೇಲೆ! ಏತಕ್ಕಾಗಿ ಆಕೆ ತನಗೆಂದು ಏನನ್ನು ಮಾಡಲಿಲ್ಲ? ಎಂಬ ಪ್ರಶ್ನೆ? ಇದಕ್ಕೆ ನಾನು ಒಂದು ಕಾರಣವಿರಬಹುದೇ? ಎಂಬ ಒಂದು ಪ್ರಶ್ನೆ.  ಇಂದು ನಮ್ಮ ಮನೆ (ಗೋಕರ್ಣದಲ್ಲಿ) ಇದ್ದೇನೆ. ಇಲ್ಲಿ ನನ್ನ ಅತ್ತಿಗೆ ತನ್ನ ಮಗಳು (ಕೇವಲ ೧೦ ವರ್ಷ) ಕೇಳಿದರೆ ಒಂದು ಲೋಟ ನೀರು ಕಾಡುವುದಕ್ಕೂ ಮೀನಾ ಮೇಷ ಎಣೆಸುತ್ತಾರೆ. ನೀನೆ ತೇಗೋಳೇ ಮಗಳೇ ಅನ್ನುತ್ತಾರೆ!!! ((ಇದನ್ನು ನಾನು ತಪ್ಪು ಅಥವಾ ಸರಿ ಯೆಂದು ಹೇಳುವುದಿಲ್ಲ. ಆಕೆಯನ್ನು ದೂರುವ ಉದ್ದೇಶವು ನನಗಿಲ್ಲ.)) ಇದನ್ನೆಲ್ಲ ನೋಡಿದರೆ ನನಗೆ ಬಹಳಾನೇ ಆಶ್ಚರ್ಯವಾಗುತ್ತದೆ. ೨೧ವರ್ಷಗಳ ತನಕ ನನ್ನಮ್ಮ ನನಗೆ ಒಂದು ದಿನವೂ ಹಾಗನ್ನೇ ಇಲ್ಲವಲ್ಲ! ನಾನು ಕೇಳುವ ಮುನ್ನವೇ ನನಗೆ ಬೇಕಿರುವುದೆಲ್ಲ ತಯಾರಿರುತ್ತಿತ್ತು. ಎದ್ದಕೂಡಲೇ ಶುಚಿಯಾಗಲು ಬೇಕಾದ ಎಲ್ಲವೂ ಬಚ್ಚಲಲ್ಲಿ ತಯಾರಿರುತ್ತಿತ್ತು. ಶುಚಿಯಾಗಿ ಬಂದಕೂಡಲೇ ತಿನ್ನಲ್ಲು ರುಚಿಯಾದ ತಿಂಡಿ ತಯಾರಿರುತ್ತಿತ್ತು. ತಿಂಡಿ ತಿಂದಕೂಡಲೇ ನನ್ನ ತಲೆ ಕೂದಲನ್ನು ಬಾಚಿ ಜೆಡೆ ಹಾಕುತ್ತಿದ್ದಳು. ನಿಜಕ್ಕೂ!! ೨೧ ವರ್ಷಗಳ ತನಕ!! ಸಂಜೆ ಶಾಲೆ ಮುಗಿಸಿ ಮನೆಗೆ ಬರುವಷ್ಟರಲ್ಲಿ ಕುಡಿಯಲು ಹಾಲು, ತಿನ್ನಲು ತಿಂಡಿ ಮಾಡಿಟ್ಟುಕೊಂಡು ಕಾದಿರುತ್ತಿದಳು. ಒಂದೇ ಒಂದು ದಿನವೂ ಬಾಕಿ ಇಲ್ಲ. ಪ್ರತೀ ದಿನ. ನಾವೇನು ಶ್ರೀಮಂತರಾಗಿರಲಿಲ್ಲ. ಒಬ್ಬರು ಮನೆ ಕೆಲ್ಸದವರಿರಲಿಲ್ಲ. ಎಲ್ಲವನ್ನು ಅವಳೇ ಮಾಡುತಿದ್ದಳು. ಈಗ ಇಲ್ಲಿ (ಗೋಕರ್ಣದ ಮನೆಯಲ್ಲಿ) ಎಲ್ಲಾದಕ್ಕು ಮನೆಕೆಲಸಕ್ಕು ಕೆಲಸದವರಿದ್ದಾರೆ. ಆದರೂ ಇಲ್ಲಿಯ ವಾತಾವರಣ ನನ್ನನು ಪ್ರತಿದಿನವೂ ಪ್ರತಿ ಘಳಿಗೆಯೂ ಆಶ್ಚರ್ಯ ಗೊಳಿಸುತ್ತದೆ. ನಾನು ನನ್ನ ಜೀವನದಲ್ಲಿ ಕಳೆದ ಆ ಹಳೆಯದಿನಗಳು ಅಷ್ಟೊಂದು ಆರಾಮದಾಯಕವಿಗ್ಗಿದೆತೆ? ನಾನು ಅಷ್ಟೊಂದು ಅದೃಷ್ಟವಂತಳಾಗಿದ್ದೇನೆ? ನನ್ನಮ್ಮನಿಗೆ ನಾನು ಸಹಾಯ ಮಾಡಬದಿತ್ತೇ? ಅವಳಿಗೆ ನನ್ನಿಂದ ತೊಂದರೆ ಯಾಗಿದೆಯೇ? ಯಾಕೆ ಅವಳು ನನ್ನನು ಅಷ್ಟು ಚೆಂದಕ್ಕೆ ಬೆಳೆಸಿದಳು? ಒಂದು ದಿನವೂ ನಾನು ತಿಂದ ಬಟ್ಟಲ್ಲನ್ನು ತೊಳೆದಿಲ್ಲ, ನೀರು ಕುಡಿದ ಲೋಟವನ್ನು ಅದರ ಜಾಗದಲ್ಲಿ ಇಟ್ಟಿಲ್ಲ. ತೊಳೆದ ಬಟ್ಟೆಯನ್ನು ಮಡಿಚಿಟ್ಟಿಲ್ಲ. ಅದೆಲ್ಲಾ ಹೋಗಲಿ, ಕಾಲೇಜು ಗೆ ಯಾವ ಬಟ್ಟೆಯನ್ನು ಹಾಕಿಕೊಂಡು ಹೋಗಬೇಕೆಂದು ನಾನಾಗಿಯೇ ಬೀರು ಇಂದ ಬಟ್ಟೆಯನ್ನು ಒಂದು ದಿನವೂ ತೆಗೆದುಕೊಂಡಿಲ್ಲ. ನಾನು ಮಿಂದು ಬರುವಷ್ಟರಲ್ಲಿ ಇಸ್ತ್ರೀ ಯಾದ ಬಟ್ಟೆ ನನಗಾಗಿ ಕಾದಿರುತ್ತಿತ್ತು. ಶಾಲೆಗೆ ಬೇಕಿರುವ ಊಟದ ಬುತ್ತಿ, ಪುಸ್ತಕದ ಬ್ಯಾಗು, ಎಲ್ಲವೂ ಎ ಟು ಝೆಡ್  ತಯಾರಿರುತ್ತಿತ್ತು. ನನಗೆ ಸುಳಿವು ಕೂಡ ಸಿಕ್ಕಿರಲಿಲ್ಲ. ಇದನೆಲ್ಲ ತಯಾರುಮಾಡುಲೂ ಎಷ್ಟು ಶ್ರಮವಿರುತ್ತದೆ. ಶ್ರಮಕ್ಕಿಂತ ಹೆಚ್ಚು ಎಷ್ಟು ತಾಳ್ಮೆ ಹಾಗು ಪ್ರೀತಿ ಇರಬೇಕಾಗುತ್ತದೆ ಎಂದು. ಈಗ ನನಗೆ ಮದುವೆ ಆಗಿದೆ. ಆದರೂ ನಾನು ಆಕೆಯ ಮನೆಗೆ (ನನ್ನ ತವರು ಮನೆಗೆ) ಹೋದಾಗ, ನಾನು ಬರುತ್ತಿದ್ದೇನೆ ಎಂದು ಎಲ್ಲವನ್ನು ತಯಾರಿಡುತಲೇ. ಹಾಸಿಗೆಗೆ ತೊಳೆದು ಸೂಚಿಯ ಚಾದರ ಹಸಿ, ಕುಡಿಯಲು ಬಾಟಲಿಗೆ ನೀರು ತುಂಬಿಸಿ, ಹೋದಕೂಡಲೇ ಕೈಕಾಲು ತೊಳೆಯಲು ಚಳಿಗಾಲದಲ್ಲಿ ಬಿಸಿ ನೀರು/ ಸೆಕೆ ಕಾಲದಲ್ಲಿ ತಂಪಾದ ನೀರು ರೆಡಿ ಇಟ್ಟಿರುತ್ತಾಳೆ. ಜೀವನವನ್ನು ಸುಲಭಗೊಳಿಸುವ ಎಲ್ಲಾ ವ್ಯವಸ್ಥೆ ಮೊದಲೇ ಆಗಿರುತ್ತದೆ.! ಏನೆಂದು ಹೇಳಲಿ? ಹೇಳುತ್ತಾ ಹೋದಷ್ಟು ಹನುಮಂತನ ಬಲದ ಹಾಗೆ ಬೆಳೆಯುತ್ತಾ ಹೋಗುತ್ತದೆ ಆಕೆಯು ನನಗೆ ಮಾಡಿರುವ ಸೇವೆಯ ಪಟ್ಟಿ!! ಒಂದು ದಿನವೂ ಆಕೆ ನನಗೆ ಬಿದಿಲ್ಲ. ನಾನು ಎಷ್ಟೋ ಅಮ್ಮಂದಿರನ್ನು ನೋಡಿದ್ದೇನೆ, ಶಾಲೆಗೆ ಮಕ್ಕಳ್ಳನ್ನು ಬಿಟ್ಟು ಹೋಗಲು ಬಂದವರು ಗುರುಗಳ ಬಳಿ ಹೋಗಿ "ನನ್ನ ಮಗ/ಮಗಳು ತಪ್ಪುಮಾಡಿದರೆ ನಾಲ್ಕು ಪೆಟ್ಟು ಕೊಡಿ ನಮಗೇನು ಬೇಜಾರಿಲ್ಲ" ಎಂದು ಹೇಳಿ ಹೋಗುತ್ತಾರೆ. ಆದರೆ ನನ್ನಮ್ಮ ಶಾಲೆಯಲ್ಲಿ ಅಪ್ಪಿತಪ್ಪಿ ಏನಾದರು ಮೇಸ್ಟ್ರು ನನಗೆ ಒಂದೇ ಒಂದು ಪೆಟ್ಟುಕೊಟ್ಟರು, ಮೇಸ್ಟ್ರಬಳಿ ಹೋಗಿ ಏಕೆ ಹೊಡೆದಿರಿ ನನ್ನ ಮಗಳಿಗೆ ಎಂದು ಸವಾಲು ಹಾಕುವುದಲ್ಲದೇ ನನ್ನ ಮಗಳಿಂದು ಏನು ತಪ್ಪಿಲ್ಲ ಎಂದು ಹೇಳಿಬರುತ್ತಿದರು. ಇದು ಕೇವಲ ಒಂದು ನಿದರ್ಶನವಷ್ಟೇ, ಈ ರೀತಿ ಎಷ್ಟೋ ಮಂದಿಗೆ ಹೇಳಿದ್ದಾರೆ. ಅವಳ ಆ ನಂಬಿಕೆ ಇಂದಲೋ ಏನು, ನಾನು ಕೂಡ ಹಾಗೆಯೇ ಬೆಳಿದ್ದಿದೆ. ಯಾರ ತಂಟೆಗೂ ಹೋಗುತ್ತಿರಲಿಲ್ಲ. ಹಾಗು ನನ್ನಮ್ಮನಿಗೆ ಏನು ಕೊಡಸಿಲು ಕಷ್ಟವಾಗಬುದು ಅದನ್ನು ಎಂದಿಗೂ ಕೇಳುತಲ್ಲೂ ಇರಲಿಲ್ಲ. 

ಒಂದು ನಿಮಿಷ ಈ ಕತೆಗೆ ಇಲ್ಲಿ ಕಡಿವಾಣ ಹಾಕೋಣ. ನನಗೆ ಒಂದು ಪ್ರಸಂಗ ನೆನಪಾಗುತ್ತಿದೆ. ಅದರ ಬಗ್ಗೆ ಹೇಳಬೇಕಿನಿಸುತ್ತಿದೆ. 

ನನ್ನ ವಯಸ್ಸು ಸರಿಸುಮಾರು ೮-೯ ನ ಸಮಯವದು. ಆಗ ನಾವು ಚನ್ನರಾಯಪಟ್ಟಣದಲ್ಲಿ ವಾಸವಿದ್ದೆವು. ಚನ್ನರಾಯಪಟ್ಟಣದಲ್ಲಿ ಶನಿವಾರ ಸಂತೆ. ಪ್ರತಿ ಶನಿವಾರ ಅಮ್ಮ ತಪ್ಪದೆ ಸಂತೆಗೆ ಹೋಗಿ ಒಂದು ವಾರಕ್ಕೆ ಬೇಕಾದಷ್ಟು ಸಾಮಾನುಗಳನ್ನು ತರುತ್ತಿದ್ದಳು. ನಾನಾಗ ಚಿನ್ನವಳೆಂದು ನನ್ನನ್ನು ಕರೆದೊಯ್ಯುತ್ತಿರಲಿಲ್ಲ. ಅಲ್ಲಿಯೇ ಅಕ್ಕ ಪಕ್ಕದ ಮನೆಯೇ ಮಕ್ಕಳೊಂದಿಗೆ ಆಟವಾಡಯೆಂದು ಹೇಳಿ ಬಿಟ್ಟು ಹೋಗುತ್ತಿದ್ದಳು. ಹೇಗಿದ್ದಾಗ ಒಂದು ಶನಿವಾರ ನನಗೆ ಅಮ್ಮನ ಜೊತೆ ಸಂತೆಗೆ ಹೋಗಬೇಕೆಂಬ ಅಸೆ ಉಂಟಾಯಿತು. ನಾನು ಬರುತ್ತೇನೆ ಅಮ್ಮ ಎಂದೇ. ಅಮ್ಮ ಅದಕ್ಕೆ ಪ್ರತ್ಯುತ್ತರವಾಗಿ"ಬೇಡ ಮಗಳು ಅಲ್ಲಿ ಹಸುಗಳು ಎಲ್ಲಿ ಬೇಕೆಂದರಲ್ಲಿ ನುಗುತ್ತವೆ. ತರಕಾರಿ ಬುಟ್ಟಿ ಇಡಿದುಕೊಂಡು ನಿನ್ನನು ನೋಡಿಕೊಳ್ಳಲ್ಲು ಕಷ್ಟ" ಎಂದು ಏನೋ ಹೇಳಿದಳು, ಅಷ್ಟು ಸರಿ ನೆನಪಿಲ್ಲ, ಒಟ್ಟು ನನ್ನನ್ನು ಕರೆದೊಯ್ಯಲಿಲ್ಲ. ಅವಳ ಬೆನ್ನ ಹಿಂದೆಯೇ ಸ್ವಲ್ಪ ದೂರ ಹೋದೆ, ಹೀಗಮ್ಮ ಮನೆಗೆ ಎಂದರು. ನಾನು ಕೋಪದಲ್ಲಿ "ಕೋಳಿಮುನ್**" ಎಂದು ಬೈದೆ. ಎಲ್ಲಿತ್ತೊಯೇನೋ ಅಮ್ಮನ ಕೋಪ, ದರ ದರ ಯೆಂದು ಬೀದಿಯಲ್ಲಿ ಎಳೆದು ಕೊಂಡು ಬಂದು ಒಂದು ಪೆಟ್ಟು ರಾಪ್ ಅಂತ ಕೊಟ್ಟಳು", ಸ್ನೇಹಿತರೊಂದಿಗೆ ಆಟವಾಡು ಎಂದರೆ ಏನೆನೊನು ಕೆಟ್ಟ ಪದ ಮಾತನಾಡಲು ಕಲಿಯುತ್ತೀಯ ಎಂದು ಗದರಿಸಿದ್ದಳು. ನನಗೆ ಹೊಡೆದು ಅವಳೇ ಅತ್ತಿದಲ್ಲೂ. ಆ ದಿನ ಯಾರು ಸಂತೆಗೆ ಹೋಗಲೇ ಇಲ್ಲ. ನಾನು ಕೂಡ ಮತ್ತೆಂದೂ ಸಂತೆಗೆ ಕರೆದೊಯ್ಯುವಂತೆ ಹಠ ಮಾಡಲಿಲ್ಲ. ನನಗೆ ನೆನಪಿರುವಾಗೆ ಅದೇ ಮೊದಲು ಅದೇ ಕೊನೆ ಅವಳು ನನಗೆ ಹೊಡೆದದ್ದು ಹಾಗು ನಾ ಆ ರೀತಿ ಪದ ಬಳಸಿದ್ದು. ಈಗಲೂ ಕೂಡ ಆ ರೀತಿ ಪದ ಅಥವಾ ಯಾವುದೇ ಬಯ್ಯೋ ಶಬ್ದಗಳನ್ನು ಉಚ್ಚರಿಸಲು ಆಗುವುದೇ ಇಲ್ಲ. ಒಂದು ರೀತಿ ಕಷ್ಟ ಎನಿಸುತ್ತದೆ. 


ಉಳಿದ ವಿಷಯವನ್ನು ಇನ್ನು ಯಾವಾಗಲಾದರೂ ಮಾತನಾಡೋಣ. ಟಾಟಾ. 




Tuesday 16 February 2021

Scary

ಎಷ್ಟು ವಿಚಿತ್ರ ಮನುಷ್ಯನ ಜೀವನ! ಎರೆಡು ವರ್ಷಗಳ ಹಿಂದೆಯಷ್ಟೆ ಒಬ್ಬಳೇ ಊರೂರು ಸುತ್ತಿದ್ದೆ. ಎರೆಡು ವರ್ಷಗಳ ನಂತರ ಮೊದಲ ಬಾರಿ ಇಂದು ಒಬ್ಬಳೇ ಇದ್ದೇನೆ. ಒಂದು ರೀತಿ ನಡುಕ. ಏನೋ! ಅರ್ಥವಾಗದ, ವಿಚಿತ್ರವಾದ ಹೆದರಿಕೆ. ಎಂತಾ ಬದಲಾವಣೆ ಕೇವಲ ಈ ಎರೆಡು ವರ್ಷಗಳಲ್ಲಿ.!ನಮ್ಮಮ್ಮ ಹೇಳುತ್ತಿರುತ್ತಾರೆ "ಮನುಷ್ಯರು ಇಂದು ಇದ್ದ ಹಾಗೆ ನಾಳೆ ಇರರು" ಅವರು ಹೇಳಿದ್ದು ಮನುಷ್ಯನ ವ್ಯವಹಾರದಬಗ್ಗೆ, ಆದರೆ ನನಗನಿಸುತ್ತದೆ, ನನ್ನಲ್ಲಿ ಕಾಣಸಿಗುವ ಬದಲಾವಣೆ ಹಾಗು ಅಮ್ಮ ಸಾಮಾಜಿಕವಾಗಿ ಹೇಳುವ ಆ ಬದಲಾವಣೆಗೂ ಮೂಲ ಒಂದೇ ಆಗಿರಬಹುದೇನೋ? ಯಂದು. ಮನುಷ್ಯನ ಮೆದುಳು ಯಾವರೀತಿ ಕೆಲಸಮಾಡುತ್ತದೆ ಹಾಗು ಭಾವನೆಗಳ ಹತೋಟಿ ಎಷ್ಟರಮಟ್ಟಿಗೆ ಇರುತ್ತದೆ ಎಂದು ಯಾರಿಗೂ ಅರಿವಿರುವುದಿಲ್ಲ. 

Sunday 14 February 2021

Beauty lies in the eyes of the beholder

"Beauty lies in the eyes of the beholder'' ಅನ್ನೋ ಮಾತು ನೀವೆಲ್ಲರೂ ಕೇಳಿಯೇ ಇರುತ್ತೀರಿ. ಹಾಗೆ ಈ ಮಾತನ್ನು ಒಪ್ಪಿಯೂ ಇರಬಹುದು ಅಥವಾ ಒಪ್ಪದೆಯೂ ಇರಬಹುದು. 

ನಾನು ಅಷ್ಟೆಲ್ಲ ಇದರ ಬಗ್ಗೆ ಯೋಚಿಸಲು ಹೋಗಿಲ್ಲ. ಎಷ್ಟೋ ಮಂದಿ ಹಾಗೇ ಸುಮ್ಮನೆ ತುಂಬಾ ಚೆನ್ನಾಗಿ ಇದ್ದರೆಂದು ಅನಿಸಿದ್ದಿದೆ (symmetry ಕರಣ ವಿರಬಹುದು).  ಆದರೆ ನನ್ನ ಗಮನ ಸೆಳೆದ ವಿಷಯ ಏನಪ್ಪಾ ಎಂದರೆ ಸಾಮಾನ್ಯವಾಗಿ ಯಾವಾಗಲು ನನಗೆ ನನ್ನ ಅಣ್ಣ, ನನ್ನ ಅತ್ತಿಗೆ, ನನ್ನ ಅಪ್ಪ, ನನ್ನ ಗಂಡ, ನನ್ನ ಅತ್ತೆ, ನನ್ನ ಸ್ನೇಹಿತರು ಹೀಗೆ ನನ್ನ ಎಂಬ ಪದ ಎಲ್ಲಿಯೆಲ್ಲ ಇದೆಯೋ ಅವರುಗಳು ಬೇರೆಯವರಿಗಿಂತ ಚೆಂದ ಇದ್ದಾರೆ ಅಂತ ಅನಿಸುತ್ತದೆ. ನಾನು ಅಮ್ಮ ಯಾವುದಾದರು ಮದುವೆ ಮುಂಜಿ ಕಾರ್ಯಕ್ರಮಕ್ಕೆ ಹೋದರೆ ಎಷ್ಟೋ ಭಾರಿ ಅಮ್ಮನಿಗೆ ಹೇಳಿದುಂಟು "ಇಲ್ಲಿ ಇರುವ ಎಲ್ಲಾ ಹೆಂಗಸರಿಗಿಂತ ನೀವೇ ಬ್ಯೂಟಿಫುಲ್ ಅಮ್ಮ". ಅದು ಸುಳ್ಳು ಸುಳ್ಳು ಹೊಗಳಿಕೆಯಲ್ಲ, ನಿಜಕ್ಕೂ ಅವರು ನನ್ನ ಕಣ್ಣಿಗೆ ಯೆಲ್ಲರಿಗಿಂತ ಸುಂದರವಾಗಿ ಕಾಣಿಸುತ್ತಾರೆ. ಹಾಗೆಯೇ ನನ್ನ ಗಂಡನು ಕೂಡ. ಅವರ ಎಷ್ಟೋ ಸ್ನೇಹಿತರನ್ನು ಭೇಟಿ ಅದಾಗಲೆಲ್ಲ ಹಾಗೆ ಅನಿಸುತ್ತದೆ. ಇವರೇ ಚೆಂದವೆಂದು.!! ಯಾವುದೇ ವಿಷಯದಲ್ಲಾದರೂ (ರಿಲೇಟಿವ್) ಏನನ್ನು ಇನ್ನೊಂದಕ್ಕೆ ಹೋಲಿಸಿ ನಾನು ಹೇಳದಿದ್ದರೂ, ಈ ವಿಷಯ ಯಾಕೋ ಹೀಗಿದೆ!! ಚೆಂದ ಎಂಬ ವಿಷಯವು ಕೇವಲ ಆಪ್ಟಿಕಲ್ ನರ್ವ್ಸ್ ಮೆದುಳಿಗೆ ಕಳಿಸು ವಿದ್ಯುತ್ ಸಂಕೇತದ ಮೇಲಷ್ಟೇ ಅಲ್ಲ ನಿಮಗೆ ಆ ವಸ್ತು/ವ್ಯಕ್ತಿಯ ಮೇಲಿರುವ ಭಾವನೆಯು ಪ್ರಭಾವ ಬೀರುತದ್ದೇ.  

ಇದಕ್ಕೆ ಇನ್ನೊಂದು ಉದಾಹರಣೆ ಯೆಂದರೆ ಅಡಿಗೆಗಳು. ಕೆಲವರಿಗೆ ಕೆಲವು ಅಡಿಗೆ ಸೇರುವುದೇ ಇಲ್ಲ ಅಥವಾ ಕೆಲವು ಅಡಿಗೆಗಳು ಕೆಲವರಿಗೆ ಬಹಳಾನೇ ಇಷ್ಟ.! ಇದಕ್ಕೆ ಕರಣ ಕೇವಲ ಅಡಿಗೆಯ ರುಚಿ ಮಾತ್ರವಲ್ಲ. ಅದರ ಬಣ್ಣ, ಅದರ ವಿನ್ಯಾಸ/ಟೆಕ್ಸ್ಚರ್, ಪರಿಮಳ, ಅಥವಾ ಅದು ಯಾವುದಾದರು ಇಷ್ಟವಿರುವ/ವಿಲ್ಲದ ವಸ್ತುವಿನ ಹೋಲಿಕೆ, ಅಥವಾ ಅಡಿಗೆ ಮಾಡಿದವರ ಮೇಲಿನ ಭಾವನೆ ಹೀಗಿ ಹತ್ತು ಹಲವು ಕಾರಣಗಳ ಮಿಶ್ರಿತ ಫಲಿತಾಂಶವಾಗಿರುತ್ತದೆ. 

ಪಂಚೇಂದ್ರಿಯ ಪ್ರಚೋಧನೆ ಯೆನ್ನ ಬಹುದೇನೋ! ಗೊತ್ತಿಲ್ಲ. ಅಥವಾ ಅನುವಂಶಿಕ ಹಾಗು ನಮ್ಮ ಸುತ್ತಮುತ್ತಲಿನ ವಾತಾವರಣ/ಪರಿಸರವು ಪ್ರಭಾವಬೀರಬಹುದು. ಎಷ್ಟು ಸಂಕೀರ್ಣವಾದ ವಿಷಯವಿದು. ಯೋಚಿಸಿದಷ್ಟೂ ಗಾಢವಾಗುತ್ತ ಹೋಗುತ್ತದೆ. ಕೆಲವೊಮ್ಮೆ ಏನನ್ನು ಯೋಚಿಸುತ್ತಿದ್ದೇವೆ ಎಂಬುದೇ ಮರೆತು ಹೋಗುತ್ತದೆ. 

Friday 12 February 2021

ಹೆಣ್ಣು ಮಕ್ಕಳಾಗಿ ಹುಟ್ಟಬಾರದು ಗುರು

ಮದುವೆ ಎಂಬುದು ಜೀವನವನ್ನು ಎಷ್ಟರಮಟ್ಟಿಗೆ ಬದಲಾವಣೆ ಮಾಡುತ್ತೆ ಅಯ್ಯೋ ದೇವರೇ. ಅಮ್ಮನ ಮನೆ ಅಮ್ಮನ ಮನೆ ಅನಿಸೋದೇ ಇಲ್ಲ, ಗಂಡನ ಮನೆ ನಮ್ಮ ಮನೆ ಅನಿಸೋದೇ ಇಲ್ಲ. ಎಲ್ಲಿಗೂ ಸಲ್ಲದವರಾಗಬೇಕು. 


Black was once white

ಮನಸ್ಸು ಮಹಾ ಮರ್ಕಟ. ಈಗ ಇದ್ದ ಹಾಗೆ ಮುಂದೆ ಇರದು. ಘಳಿಗೆಗೊಮ್ಮೆ ಬದಲಾಗುತ್ತಲೇ ಇರುವುದು. ಇಂದಿನ ಸತ್ಯ ನಾಳೆಗೆ ಸುಳ್ಳು. ಬದಲಾವಣೆ ಜಗದ ನಿಯಮ ಎಂದು ಎಲ್ಲರೂ ಹೇಳುತ್ತಾರೆ, ಆದರೂ ತಾವು ಬದಲಾಗೆವುಯೆಂಬ ಬಂಡ ನಂಬಿಕೆಯೋ ಅಥವಾ ಆ ತಕ್ಷಣಕ್ಕೆ ಹಾಗನಿಸುವುದೋ ಗೊತ್ತಿಲ್ಲ, ಜೀವನ ಪರಿಯ ಭಾಷೆ ಕೊಟ್ಟು ಬಿಡುತ್ತಾರೆ. ಜೀವನವನವನ್ನು ಒಮ್ಮೆ ಹಿಂತಿರುಗಿ ನೋಡಿದರೆ ತಿಳಿಯುತ್ತದೆ ಎಷ್ಟೋ ಸುಳ್ಳುಗಳ ಕಂತೆಯ ದಾರಿಯಲ್ಲಿ ನಾವು ನಡೆದು ಬಂದಿರುವೆವೆಯೆಂದು!! ಅಕ್ಕ ಪಕ್ಕದ ಮನೆಯವರಿಗೆ, ಜೊತೆಯಲ್ಲಿ ಓದಿದ ಗೆಳತಿಗೆ, ತುಂಬಾ ಇಷ್ಟಪಟ್ಟ ಶಿಕ್ಷಕಿಗೆ, ಯಾವಾಗಲು ಹೋಗುತ್ತಿದ್ದ ದೇವಸ್ಥಾನದ ಅರ್ಚಕರಿಗೆ, ಮೊದಲ ಪ್ರೀತಿಗೆ, ದೂರ ಅದೆಲ್ಲೋ ವಾಸಿಸುವ ಸ್ನೇಹಿತರಿಗೆ, ಎಲ್ಲರಿಗೂ ಒಂದು ಸುಳ್ಳು ಆಶ್ವಾಸನೆ. ಹುಟ್ಟಿದ ಊರೊಂದು, ಬೆಳೆದ ಊರೊಂದು, ಕಲಿತವೂರೊಂದು, ಕೆಲಸಮತ್ತೊಂದೂರು, ಮದುವೆಯಾದದ್ದು ಇನ್ನೊಂದೂರು, ಈ ನಡುವೆ ಹೇಳಿದ ಸುಳ್ಳುಗಳು ಬೆಟ್ಟದಷ್ಟು. ನಮಗೆ ನಾವು ಎಷ್ಟು ಸುಳ್ಳುಗಳನ್ನು ಹೇಳಿಕೊಂಡಿರುವೆವೋ. ಅದರ ಲೆಕ್ಕ ಆಕಾಶದಷ್ಟು. ಇವೆಲ್ಲವನ್ನು ಸುಳ್ಳು ಅನ್ನುವುದಕ್ಕಿಂತ ವಿಕಾಸನವೆನ್ನಬಹುದೇನೋ ಎಂಬ ಮತ್ತೊಂದು ಸುಳ್ಳು ಮನಸ್ಸಿನ ನೆಮ್ಮದಿಗಾಗಿ. ಅಥವಾ ಆ ಕ್ಷಣದ ಸತ್ಯವನ್ನು ಜೀವನದ ಸತ್ಯವೆಂದು ನಮಗೆ ನಾವು ಸಪ್ಸ್ಟಿಪಾಡಿಕೊಂಡ ಮತ್ತೊಬರಿಗೆ ಸುಳ್ಳನು ಹೇಳಲು ಪ್ರೇರೇಪಿಸಿದ ಸುಳ್ಳೊಏನೋ . ಸತ್ಯ ಸುಳ್ಳು ನೋವು ನಲಿವು ದುಃಖ್ಖ ದುಮ್ಮಾನ ನಗು ಅಳುಗಳೆಂಬ ನಾನಾ ಭಾವನೆಗಳಲ್ಲಿ ಸಿಲುಕಿ ಸರಿ ತಪ್ಪುಗಳೆಂಬ ಕಡಿವಾಣಗಲಾಕಿಕೊಂಡು, ಚಿಂತೆ ಎಂಬ ಚಿತೆ ಏರಿ,  ಜೀವನ ಲೈಟ್ ಆಗಿ ತಗೋಬೇಕು ಸ್ವಾಮಿ ಅಂತ ನಗುನಗುತ್ತಾ ಮತ್ತೊಬ್ಬರಿಗೆ ಸುಳ್ಳು ಬುದ್ದಿವಾದ ಹೇಳಿ, ಇರುವಷ್ಟು ದಿನ ಬದುಕಿ ಚಟ್ಟ ಕಟ್ಟಿಸಿಕೊಂಡು ಪ್ರತಿಯೊಬ್ಬ ಮನುಷ್ಯನು ಹೋಗಲೇ ಬೇಕು. 

"ಲೈಫು ಇಷ್ಟೇನೆ, ಫುಲ್ ಆಫ್ ಲೈಸ್"

ಪ್ರೇಮಿಗಳ ದಿನ ಹತ್ತಿರದಲ್ಲೇ ಬರುತ್ತಿದೆ. ನನ್ನ ಜೀವನದ ಏಕೈಕ ಸತ್ಯ ನನ್ನ ಕೃಷ್ಣನಿಗೆ ಸತ್ಯವೆಂಬ ಸುಳ್ಳು ಅಥವಾ ಸುಳ್ಳೆoಬ ಸತ್ಯವೋ, (ಯಾವುದೊ ಒಂದು) ಹೇಳಿ ಮುದ್ದುಮಾಡಬೇಕು, ಸಧ್ಯಕ್ಕೆ ನೀವು ಹೆಚ್ಚು ತಲೆ ಕೆಡಿಸಿಕೊಳ್ಳದೆ ಒಮ್ಮೆ ನಕ್ಕು ಬಿಡಿ. ಜೀವನ ಲೈಟ್ ಆಗಿ ತಗೋಬೇಕು ಸ್ವಾಮಿ. ಟಾಟಾ 

Wednesday 3 February 2021

Fear of Success.

ಹೀಗೂ ಒಂದು ಇದೆಯೇ ಯೆಂದು ಭಾವಿಸಬೇಡಿ. ಇದು ಸತ್ಯ! ನನ್ನ ಕಥೆ ವಿಚಿತ್ರವೆನಿಸಬಹುದೇ ನಿಮಗೆ ಅಥವಾ ನಿಮ್ಮ ಕಥೆಯು ನನ್ನನ್ನ ಕಥೆಯೇ ಇರಬುದು! ಈ ಲೇಖನ ಯಾರನ್ನು ದೂಷಿಸುವುದಕ್ಕಲ್ಲ. ಇಲ್ಲಿ ಯಾವುದು ತಪ್ಪು ಯಾವುದು ಸರಿಯಂಬುದರ ಚರ್ಚೆಯ ಅಗತ್ಯವೂ ಇಲ್ಲ. ಅತಿರೇಖ ಅನ್ನಿಸಿದಲ್ಲಿ ಆಶ್ಚರ್ಯವಿಲ್ಲ. 

ನನ್ನನಣ್ಣ ಓದುವುದಲ್ಲಿ ಹುಷಾರಿ. ೫ನೇ ತರಗತಿಯಲ್ಲಿಯೇ ನವೋದಯ ಪರೀಕ್ಷೆ ಪಾಸ್ ಮಾಡಿದ. ಬೋರ್ಡಿಂಗ್ ಶಾಲೆ ಸೇರಿದ. ಅಮ್ಮನಿಗೆ ನಾನು ಹುಷಾರಿಯಾಗಬೇಕೆಂಬ ಹಂಬಲ. ಶಾಲೆಗೆ ದೂರ ಕಲಿಸುವ ಮನಸಿತ್ತೋ ಬಿಟ್ಟಿತೋ ಗೊತ್ತಿಲ್ಲ, ಆದರೆ ನಾನು ಪರೀಕ್ಷೆ ತೆಗೆದುಕೊಳ್ಳ ಬೇಕೆಂಬ ಆಸೆ. ನಾನು ತೆಗೆದು ಕೊಂಡೆ. ಅನುತೀರ್ಣಳಾದೆ. ಅಲ್ಲಿಂದ ಎಲ್ಲವೂ ಬದಲಾಯಿತು. ನನಗೆ ನನ್ನ ಮೇಲೆ ಖಿನ್ನತೆಯ ಭಾವ. ಅಥವಾ ನನಗೆ ಕಷ್ಟವಿರುವ ಯಾವುದೇ ಪರೀಕ್ಷೆ ಎದರಿಸುವುದೇ ಭಯ! ಎಲ್ಲಿ ಉತ್ತೀರ್ಣಳಾಗಿಬಿಡುವೆನೋ ಎಂಬ ಭಯ!! ಹೌದು. ನೀವು ಓದಿದ್ದು ಸರಿಯೇ ಇದೆ. ಉತ್ತೀರ್ಣಳಾಗಿಬಿಟ್ಟರೆ ಮುಂದೆ ಏನೋ, ದಾರಿ ಕಷ್ಟ ವಿರಬಹುದು. ನನ್ನಿಂದ ಜನ ಹೆಚ್ಚೇ ಅಪೇಕ್ಷಿಸಬಹುದೇನೋ. ಒಂದು ಸಲ ಉತ್ತೀರ್ಣಳಾದರೆ ಪ್ರತಿಭಾರಿಯೂ ಉತ್ತೀರ್ಣಳಾಗಲೇ ಬೇಕೆಂಬ ಅಪೇಕ್ಷೆ ಮೂಡಬಹುದೇನೋ. ಅಥವಾ ನನ್ನ ನನ್ನ ಗೆಲುವು ಆಕಸ್ಮಿಕ ಅನಿಸಬಹುದೇ ಹೀಗೆ ಬೇಡದ ಇಲ್ಲದ ಸಲ್ಲದ ಮಳ್ಳು ಯೋಚನೆಗಳು! ಆದಷ್ಟು ಲೊ ಪ್ರೊಫೈಲ್ ಮೈನ್ಟೈನ್ ಮಾಡಿಕೊಂಡೆ ಬಂದಿದ್ದೆ. ಇಂಜಿನಿಯರಿಂಗ್ ಸೆರೆಂದು ಸ್ನೇಹಿತರು ಎಷ್ಟೇ ಒತ್ತಾಯಮಾಡಿದರು ಸೇರಲಿಲ್ಲ. ಮುಂದೆ ಬಿ. ಯಸ್ ಸಿ. ಆದಮೇಲೆ ಯಾವುದೇ ಕೆಲ್ಸಕ್ಕೆ ಪರೀಕ್ಷೆ ತೆದುಕೊಳ್ಳಲಿಲ್ಲ. ಆಗಸ್ಟ್ ಅಣ್ಣ ಇಂಜಿನಿಯರಿಂಗ್ ಮುಗಿಸಿ ಗೇಟ್ ಪರೀಕ್ಷೆ ಉತ್ತೀರ್ಣವಾಗಿ ಭಾರತದ ಪ್ರತಿಷ್ಠಿತ ಇನ್ಸ್ಟಿಟ್ಯೂಟ್ ಐ ಐ ಯಸ್ ಸಿ ಯಲ್ಲಿ ಎಂ ಟೆಕ್ ಸೇರಿದ್ದ. ಆ ಸಮಯದಲ್ಲಿ ನಾನು ಕೆಲವು ಪರೀಕ್ಷೆ ಯನ್ನು ತೆಗೆದುಕೊಂಡಿದ್ದೆ. ಮತ್ತೆ ಉತ್ತೀರ್ಣವಾಗಲಿಲ್ಲ. ಇನ್ನಷ್ಟು ಕುಗ್ಗಿ ಹೋದೆ. ೨೨ ವರ್ಷ ಅಪ್ಪ ಅಮ್ಮನ ಜೊತೆಯಲ್ಲಿ ಇದ್ದ ನಾನು ಎಂ ಯಸ್ ಸಿ ಗಾಗಿ ಮೈಸೂರ್ ಸೇರಬೇಕಾಯಿತು. ಮನೆಯ ಸೆಳೆತ. ಪ್ರತಿ ವಾರವೂ ಮನೆಗೆ ಬರುತ್ತಿದ್ದೆ. ಓದಿನಲ್ಲಿ ಹಿಂದೇಟಾಯ್ತು ಮೊದಲನೇ ವರ್ಷ. ಎರಡನೇ ವರ್ಷ ಚೇತರಿಸಿಕೊಂಡೆ. ಆಗೆಲ್ಲ ಹುಡುಗಾಟದ ಜೀವನವಾಗಿತ್ತು. ಕೆಲಸಕ್ಕೆ ಸೇರುವುದೆಂದರೆ ಅಷ್ಟೆಲ್ಲ ಕಷ್ಟ ವೆಂಬ ಅರಿವಿರಲಿಲ್ಲ. ಯಾವುದೇ ಕಷ್ಟ ಪಡಲು ಹೆದರಿಕೆ. ಸೋತರೆ ಎಂಬ ಭಯ. ಈಗ ಗೆದ್ದರೆ ಎಂಬ ಭಯ ಮರೆಯಾಗಿತ್ತು. ಸೋತರೆ ಅಪಮಾನ ವೆಂಬ ಯೋಚನೆ ಷುರುವಾಗಿತ್ತು. ಹಾಗಾಗಿ ಯಾವುದಕ್ಕೂ ಪ್ರಯತ್ನಿಸಲಿಲ್ಲ. ಉಂಡಾಡಿ ಗುಂಡನಾದೆನೇನೋ ! ಈಗ ಅದರ ಬೆಲೆ ತೆರುತ್ತಿದೇನೆ. ಎಷ್ಟು ಕ್ಷಮತೆ ಇದ್ದರೇನು? ಎಷ್ಟು ಒಳ್ಳೆಯ ಅಂಕವಿದ್ದರೇನು? ಅಷ್ಟೇ ಒಳ್ಳೆಯ ಸ್ಥಾನಮಾನ ವಿರಬೇಕಲ್ಲವೇ ಎಂಬ ಅರಿವು ನನ್ನ ಗಂಡನಿಂದ ಮೂಡಿದೆ ಅಥವಾ ಇನ್ನಷ್ಟು ಜವಾಬ್ದಾರಿಗಳಿಂದ ಓಡಿ ಹೋಗುವು ಅವಕಾಶ ಮುಗಿದೋಗಿದೆ. ಈಗ ಡಾಕ್ಟಾರೇಟ್ ಕೂಡ ಮುಗಿಯಿತು. ಜೀವನದಲ್ಲಿ ಒಂದು ಐಡೆಂಟಿಟಿ ಎಷ್ಟು ಮುಖ್ಯವೆಂಬುದರ ಅರಿಮು ಸಹ ಮೂಡಿತು. ಅದಕ್ಕಾಗಿ ಶ್ರಮಿಸುತ್ತಿದೇನೆ ಕೂಡ. 

ನನಗಿನ್ನೂ ನೆನಪಿದೆ ೨೦೧೩-೧೪ ರಲ್ಲಿ IISc ಗೆ ಹೋದಾಗ ಅಣ್ಣನ ಡಿಪಾರ್ಟ್ಮೆಂಟ್ ಗೆ ಭೇಟಿಕೊಟ್ಟಿದ್ದೆ ಅಲ್ಲಿ ಅವನ ಸ್ನೇಹಿತರೊಬ್ಬರಿದ್ದರು ಅವರು ಹೀಗೆ ಹೇಳಿದರು " ಫಾಲೋವಿಂಗ್ ಯುವರ್ ಬ್ರದರ್ಸ್ ಫುಟ್ ಸ್ಟೆಪ್ಸ್ ?" ನಾನು ನಕ್ಕಿ ಹೂ ಅಂದ್ದಿದೆ. ಈಗ ಅನಿಸುತ್ತಿದೆ ಹಾಗೆ ಮಾಡಬೇಕಿತ್ತು ಯೆಂದು!!!!   ಮಿಂಚಿ ಹೋದ ಸಮಯಕ್ಕೆ ಚಿಂತಿಸಿ ಫಲವಿಲ್ಲ. ನಮ್ಮಮ್ಮ ಯಾವಾಗಲು ಹೇಳುತ್ತಾರೆ "ಧೈರ್ಯಮ್ ಸರ್ವಸ್ತ್ರ ಸಾಧನಂ" ಎಷ್ಟು ಸತ್ಯವಲ್ಲವೇ ಇದು. 


ನ ಮಕ್ಕಳಿಗೆ ಹೇಳುವುದಿಷ್ಟೇ "ನನ್ನಂತೆ ಆಗಬೇಡಿ". ಪೋಷಕರಿಗೆ ಹೇಳುವುದಿಷ್ಟೇ "ಮಕ್ಕಳ  ಮೇಲೆ ಹೆಚ್ಚು ನಿರೀಕ್ಷೆ ಇಡಬೇಡಿ. ಇಟ್ಟರೂ ಅದನ್ನು ಅವರ ಅರಿವಿಗೆ ಬರಲು ಬಿಡಬೇಡಿ. ಹೊರ ಜಗತ್ತಿನ ಅರಿವು ಆದಷ್ಟು ಮೂಡಿಸುವ ಪ್ರಯತ್ನದ ಜೊತೆಗೆ ಜೀವನವಿರುವುದು ಜೀವಿಸಲು ಎಂಬ ಪಾಠವನ್ನು ಹೇಳಿ "

Tension

ಎಷ್ಟು ಕಷ್ಟ ಈ ಟೆನ್ಷನ್ ಇಂದ ಹೊರ ಬರುವುದು. ಅಬ್ಬಬ್ಬಾ ಕರೆಯದ ಬರುವ ಈ ಅತಿಥಿ, ಹೋಗು ಎಂದರು ಹೋಗದ ಪರಿಸ್ಥಿತಿ. ಬುದ್ದಿಗೆ ಗೊತ್ತಿದೆ ಚಿಂತೆ ಚಿತೆ ಯೆಂದು, ಆದರೂ ಏಕಿಷ್ಟು ಹಟ ಈ ಬುದ್ದಿಗೆ? ಬುದ್ಧಿಯೇ ಬುದ್ದಿಯ ಮಾತು ಕೇಳುತ್ತಿಲ್ಲ. ಬೇಡ ಬೇಡ ಅಂದರು ಒತ್ತಡದ ಭಾವನೆ ಒತ್ತೊತ್ತಾಗಿ ಬರುತ್ತಲೇ ಇದೆ. ಸುತ್ತಮುತ್ತ ನಡೆಯುತ್ತಿರುವ ಘಟನೆಗಳು ಏಕಿಷ್ಟು ಪ್ರಭಾವ ಬೀರುತ್ತಿದೆ? ನನ್ನ ಜೀವನದಲ್ಲಿ ಎಲ್ಲವೂ ಕುಶಲ ಆದರೂ ಕ್ಷೇಮವಾಗಿಲ್ಲವೇಕೆ ನಾನು? ಯೋಗ ಪ್ರಾಣಾಯಾಮದ ಮೊರೆ ಹೋಗಾಯ್ತು, ಗೂಗಲ್ ಮಾಡಿ ಕಾಮ್ ಆಗುವುದು ಹೇಗೆ ಎಂದು ಸುಂದರವಾದ ಕೋಟ್ಸ್ ಓದಿಯಾಯಿತು. ಯುಟ್ಯೂಬ್ ನಲ್ಲಿ ರಿಲಾಕ್ಸಿಂಗ್ ಮ್ಯೂಸಿಕ್ ಕೇಳಿಯಾಯಿತು. ಆದರೂ ಹುಂ ಹುಂ. ಕೆತ್ತಬಾಜಿ ಈ ಟೆನ್ಷನ್. ಅಂಟಿ ಹಿಡಿದ ಎಣ್ಣೆ ಜಿಡ್ಡಿನ ಹಾಗೆ. ಹೋಗುವ ಲಕ್ಷಣವೇ ತೋರುತ್ತಿಲ್ಲ. ಹಾಗೆ ನೋಡಿದರೆ ನಾನು ಬಹಳಾನೇ ಆರಾಮವಾಗಿರಬೇಕಿರು ಸಮಯವಿದು. ಈಗಷ್ಟೇ ಪಿ ಹೆಚ್. ಡಿ. ಮುಗಿಯಿತು. ಸ್ವಲ್ಪ ವಿಶ್ರಮಿಸಿ ಕೆಲ್ಸಕ್ಕೆ ಹೋದರಾಯ್ತು. ಹಾಗು ಹೇಳಬೇಕೆಂದರೆ ಎಲ್ಲವೂ ಹಂತೋಪ ಹಂತವಾಗಿ ನಮ್ಮ ಜೀವನದಲ್ಲಿ ಅಭಿವೃದ್ಧಿಯೇ ಯಾಗುತ್ತಿದೆ. ನಾನು ಸಹ ನನ್ನ ಸ್ವ-ಅಭಿವೃದ್ಧಿಗೆ ಶ್ರಮಿಸುತ್ತಿದೇನೆ, ಎಲ್ಲವೂ ಒಳ್ಳೆಯದೇ ಆಗುತ್ತಿದೆ, ಆದರೂ ಯಾವುದೊ ಕಾಣದ, ತಿಳಿಯದ ಒತ್ತಡ. ಯಾರಿಗೂ ಹೇಳುವಂತಿಲ್ಲ. ಹೇಳಿದರೆ ಅರ್ಥವು ಆಗುವುದಿಲ್ಲ. ಅರ್ಥವಾದರೂ ಇದರಿಂದ ಹೊರಬರಲು ಯಾರು ಸಹಾಯ ಮಾಡುವುದಿಲ್ಲ. ಸಹಾಯ ಮಾಡುವ ನೆಪದಲ್ಲಿ ಬುದ್ದಿ ಮಾತು ಹೇಳಹೊರಡುವರು. "ಸ್ವಾಮಿ, ನನಗೆ ಬುದ್ದಿಮಾತು ಬೇಡ ಈಗ, ನನ್ನ ಮಾತು ಸ್ವಲ್ಪ ಕೇಳಿ ಸಾಕು. ಸುಮ್ಮನೆ ನನ್ನೊಂದಿಗೆ ಸ್ವಲ್ಪ ಕಾಲ ಕುಳಿತುಕೊಳ್ಳಿ ಸಾಕು, ಸ್ವಲ್ಪ ಒಳ್ಳೆಯ ಮಾತನಾಡಿ ಸಾಕು, ಸ್ವಲ್ಪ ನಕ್ಕು ನಲಿಯಿರಿ ಸಾಕು. " ಅಂತ ಹೇಗೆ ತಾನೇ ಹೇಳಲಿ ನಾನು? ನಿಮಿಷ ನಿಮಿಷಕ್ಕೂ, ಎಲ್ಲಾ ಮಾತಿಗೂ ಕೋಪ ತಾಪ. ಯಾಕೀಗೆ? "ನನ್ನನ್ನು ನನ್ನ ಪಾಡಿಗೆ ಬಿಟ್ಟರೆ ನಾನು ನನಗೆ ತಿಳಿದ ಮಟ್ಟಿಗೆ ಸರಿಯಾದ ಹಾದಿಯಲ್ಲೇ ಹೋಗುವೆ ಎಂಬ ನಂಬಿಕೆ. ಯಾರಿಗಿಷ್ಟವಿಲ್ಲ ಹೇಳಿ ಯಶಸ್ವಿಯಾಗುವುದು?   ಯಾಕೆ ನಾನು ಇಷ್ಟೆಲ್ಲ ವರಿ ಮಾಡುವಂತೆ ಪರಿಸ್ಥಿತಿಗಳ ನಿರ್ಮಾಣ ಮಾಡುತ್ತಿರುವರು??" ಅಂತೆಲ್ಲ ಅನಿಸುತ್ತದೆ. ಈ ಬರವಣಿಗೆ ಯಾದರು ಸ್ವಲ್ಪ ಮಟ್ಟಿಗೆ ನೆಮ್ಮದಿ ತರಬಹುದೇನೋ ಯೆಂಬ ನಂಬಿಕೆ, ಸ್ವಲ್ಪಮಟ್ಟಿಗಾದರೂ ಒಳ್ಳೆಯ ನಿದ್ರೆ ಬರಬಹುದೇನೋ ಯಂಬ ಆಸೆ.