Tuesday, 6 November 2018

ಅರಿವೇ ಗುರು. (part-1)

ಅರಿವೇ ಗುರು. ಬಸವಣ್ಣನವರ ಈ ಮಾತು ಎಷ್ಟು ಸತ್ಯ. ಅಲ್ಲವೇ?
ನನಗೆ ಅಪ್ಪನೇಳಿದ ಮಲಯಾಳಂ ಭಾಷೆಯ ನುಡಿಮುತ್ತೊಂದು ಹೀಗಿದೆ "ತನ್ನತಾನರೀತಿಲೇ ಪಿನ್ನೆ ತಾನರಿವು" (ಪದಗಳು ತಪ್ಪಿದ್ದರು ಇರಬಹುದು, ಮಲಯಾಳಂ ಭಾಷೆ ನನಗೆ ಬರುವುದಿಲ್ಲ).  ಅಂದರೆ, "ನಿನ್ನ ನೀ ಅರಿತರೆ. ಬೇರೆಯದೆಲ್ಲ ನಂತರ ಅರಿವಾಗುತ್ತದೆ".




ಯವನಿಕಾ ಕ್ಯಾಂಟೀನ್

೨೦೧೫ರಲ್ಲಿ ಸಂಶೋಧನ ವಿಧ್ಯಾರ್ಥಿಯಾಗಿ ಬೆಂಗಳೂರು ವಿಶ್ವವಿದ್ಯಾಲಯದ ಭೌತಾಶಾಸ್ತ್ರ ವಿಭಾಗಕ್ಕೆ ಸೇರಿಕೊಂಡೆ. ನಂತರದ ದಿನಗಲ್ಲಿ ಗೆಸ್ಟ್ ಲೆಕ್ಚರರ್ ಆಗಿ  UVCE (University Visvesvaraya College of Engineering ಬೆಂಗಳೂರು ವಿಶ್ವವಿದ್ಯಾಲಯದ ಒಂದು ಅಂಗಸಂಸ್ಥೆ) ಯಲ್ಲಿ ಕೆಲಸ ಮಾಡಲು ಶುರು ಮಾಡಿದೆ. ಆ ದಿನಗಳ್ಲಲಿ ನನ್ನ ಸಹೋದ್ಯೋಗಿಯಾಗಿದ್ದ ರವಿ ಪಾಟೀಲ್ ಸರ್ ನನ್ನನ್ನೊಂದು ದಿನ ಊಟಕ್ಕೆಂದು UVCE ಬಳಿ ಲೋಕೋಪೋಯೋಗಿ ಇಲಾಖೆಯ (PWD) ಒಳಗಣ ಒಂದು ಕ್ಯಾಂಟೀನ್ಗೆ ಕರೆದೋಯ್ದರು, ಅದುವೆ ಯವನಿಕಾ ಕ್ಯಾಂಟೀನ್ . UVCE ಭೌತಾಶಾಸ್ತ್ರ ಪ್ರಯೋಗಾಲಯದಿಂದ ಸುಮಾರು ೧೦ ನಿಮಿಷ ನಡೆದೋಗುವ ದಾರಿ. ದಾರಿ ಉದ್ದಕ್ಕೂ ರವಿ ಸರ್ ಆ ಕ್ಯಾಂಟೀನ್ನಲ್ಲಿ ಸಿಗುವ "ರಸಂ" ಬಗ್ಗೆ ಮಾತನಾಡುತ್ತ, ಹೊಗಳುತ್ತಾ ಹೋದರು. ಮೊದಲೇ ಹೊಸ ರುಚಿಯ ರುಚಿಸಲು ಹುಡುಕಾಡುವ ನನ್ನ ನಾಲಿಗೆ, ಅವರ ವಿವರಗಳ ಕೇಳಿ ನೀರೂರಿಸಲು ಶುರು ಮಾಡಿತ್ತು. ಅವರು ನನ್ನಲ್ಲಿ ಮೂಡಿಸಿದ್ದ ನಿರೀಕ್ಷೆಗಳಾವುವು ಹುಸಿಯಾಗಲಿಲ್ಲ. ಜೀವನದಲ್ಲಿ ಸೇವಿಸಿದ ಅತ್ಯುತ್ತಮ್ಮ ರಸಂಗಳಲ್ಲಿ ಅದು ಕೂಡ ಒಂದಾಗಿತ್ತು. ನನಗಾಗುವಾಗ ಸ್ವಲ್ಪ ಹೆಚ್ಚೇ ಕಾರ ಎನಿಸಿತಾದರೂ ಮೂಗನ್ನು ಸುರ್ ಸುರ್ ಮಾಡುತ್ತಲ್ಲೇ ರಸಂ ಊಟ ಮಾಡಿದೆ. ಅದಾದ ನಂತರದ ದಿನಗಲ್ಲಿ ಅದೆಷ್ಟೋ  ಸಲ ಅಲ್ಲಿ ಊಟಕ್ಕೆ ಹೊಗ್ಗಿದ್ದೇನೆ. ಆದರೆ ಆ ರಸಂ ರುಚಿ ನನ್ನನ್ನು ತನ್ನೊಳಗೆ ಎಷ್ಟು ಭದ್ರವಾಗಿ ಬಂಧಿಸ್ಸಿತೆಂದರೆ ಇದುವರೆಗೂ ಆ ಕ್ಯಾಂಟೀನ್ನಲ್ಲಿ ಬೇರೆ ಯಾವುದೇ ಅಡಿಗೆಯ ರುಚಿ ನೋಡಲು ಬಿಡದಷ್ಟು.

ನೀವು ಒಮ್ಮೆ ಭೇಟಿ ಕೊಡಿ. ಒಮ್ಮೆ ನಿಮ್ಮ ನಿಮ್ಮ ಮೂಗನ್ನು ಸುರ್ ಸುರ್ ಯೆಂದು ಶಬ್ಧಮಾಡಿ. ಒಂದು ಪ್ಲೇಟ್ ರಸಂ ಊಟ ಮಾಡಿನೋಡಿ.
***********************************************
ನನ್ನಪ್ಪ ಹೇಳಿದ ಒಂದು ಸಣ್ಣ ಕತೆ ನಿಮಗೆ ಹೇಳಬೇಕೆನಿಸುತ್ತಿದೆ.
ಒಂದು ಊರಿನಲ್ಲಿ ಒಬ್ಬ ರಾಜನಿದ್ದನಂತೆ.
(ಯಾವ ಊರು? ರಾಜನ ಹೆಸರೇನೆಂದು? ನನ್ನ ಕೇಳಬೇಡಿ. ಅವನ ಹೆಸರೇನೆಂದು ಅಪ್ಪನಿಗೆ ನೆನಪಿಲ್ಲ. ಊರು ಯಾವುದೆಂದು ಗೊತ್ತಿಲ್ಲ.)
ಆ ರಾಜ ಮಹಾನ್ ತಿಂಡಿಪೋತ.
ಅವನ ರಾಜ್ಯವಲ್ಲದೆ, ಸುತ್ತ ಮುತ್ತ ಇದ್ದ ರಾಜ್ಯಗಲ್ಲಿಂದ ಒಳ್ಳೊಳ್ಳೆ ಅಡಿಗೆ ಭಟ್ಟರನ್ನು ಕರೆಸಿ ರುಚಿ ರುಚಿಯಾದ ತಿಂಡಿ ತಿನಿಸುಗಳ್ಳನ್ನು ಮಾಡಿಸಿ ತಿನ್ನುತಿದ್ದನಂತೆ.
ಪಾಪ.... ಅಡಿಗೆ ಮಾಡಿ ಬಡಿಸುವವರು ಎಷ್ಟೇ ಜನವಿದ್ದರು, ಹೊಟ್ಟೆಗೆ ಹಿಡಿಸುವಷ್ಟೇ ಅಲ್ಲವೇ ತಿನ್ನಲ್ಲು ಸಾಧ್ಯ. ಅದಕ್ಕೆ ಈ ಭೂಪ ಏನು ಮಾಡುತ್ತಿದ್ದನಂತೆ ಗೊತ್ತೇ? ಹೊಟ್ಟೆ ತುಂಬುವವರೆಗೂ ಘಡತ್ತಾಗಿ ತಿಂದು, ನಂತರ ವೈದ್ಯರ ಸಲಹೆಯಂತೆ ಮಾಡಿ, ತಿಂದದ್ದನ್ನೆಲ್ಲ ಹೊರ ಕಕ್ಕಿ ಹೊಟ್ಟೆ ಕಾಲಿ ಮಾಡಿ, ಮತ್ತೆ ತಿನ್ನುತ್ತಿದ್ದನಂತೆ.
************************************************
ಎಲ್ಲರೂ ದುಡಿಯುವುದು ಈ ಹೊಟ್ಟೆಗಾಗಿಯೇ ಅಲ್ಲವೇ. ದುಡಿಮೆಯ ಅಥವ ಊಟದ ವಿಷಯವೇನಾದರೂ ಬಂದಾಗ ಅಪ್ಪ ಮಾತಿನ ನಡುವೆ ಈ ಹಾಸ್ಯ ಮಾಡುತ್ತಿರುತ್ತಾರೆ, "ಹೇ ಕುದ, ಜೋ ಭೀ ಕೀಯ ಇಸ್ ಪಾಪಿ ಪೆಟ್ಕೆ ವಾಸ್ತೆ ಕೀಯ, ಇಸ್ ಪೆಟ್ ಕೋ ಮತ್ ಮಾರೋ, ಮಾರ್ನ ಹೇತೋ **ಡ್ ಫೆ ಮಾರೋ" ಯೆಂದು ಮುಸಲ್ಮಾನರು ನಮಾಜ್ ಮಾಡುವುದು.
(ಇಲ್ಲಿ ಯಾವುದೇ ಧರ್ಮ ಹಾಗು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು ಉದ್ದೇಶವಲ್ಲ. ಕೇವಲ ವಾಸ್ತವತೆಯನ್ನು ಹಾಸ್ಯದ ಮೂಲಕ ಪ್ರತಿಬಿಂಬಿಸುವುದಷ್ಟೇ. ಕ್ಷಮೆ ಇರಲಿ.)
*************************************************

Sunday, 28 October 2018

ಪ್ರೀತಿ

ನನಗೆ ಹುಚ್ಚುಯೆಂದು ಅವನು ಸಾವಿರ ಸಲ ಹೇಳಿದುಂಟು.
ಇದು ಹುಚ್ಚುಯೆಂದು ಎನಿಸಿದರೆ ಹುಚ್ಚೇ ಸರಿ, ಹೌದು ನನಗೆ ಹುಚ್ಚು.

ನಿನ್ನದಲ್ಲದವರನ್ನು ಯಾಕಿಷ್ಟು ಪ್ರೀತಿಸುವೆ? ಎಂದು ಕೇಳುವವರಿಗೇನೆನ್ನ ಬೇಕು?
ಸ್ವಾಮಿ, ಇಲ್ಲಿ ಯಾರು ಯಾರಿಗೂ ಸ್ವಂತವಲ್ಲ. ನೀನು ಒಬ್ಬರನ್ನು ಪ್ರೀತಿಸಲು ಅವರು ನಿನ್ನವರು ಯೆಂಬ ಹಣೆ ಪಟ್ಟಿ ಹೊತ್ತು ಈ ಭೂಮಿಗೆ ಬಂದಿರಬೇಕಿಲ್ಲ. ಪ್ರೀತಿಯ ಉದ್ದೇಶ ಪ್ರೀತಿಸಿದವರನ್ನು ಪಡೆದು ಕೊಳ್ಳುವುದಲ್ಲ. ಪ್ರೀತಿಯನ್ನು ಕೊಡುವುದು.

ಇಲ್ಲಿ ಒಂದು ಸಮಸ್ಯೆ ಏನಪ್ಪಾ ಯೆಂದರೆ, ನೀನೇನೋ ಪ್ರೀತಿಯನ್ನು ಕೊಡುವೆ, ಆದರೆ ಆ ಪ್ರೀತಿಯನ್ನು ಅವರು ಸ್ವೀಕರಿಸದಿದ್ದರೆ? ಸ್ವೀಕರಿಸದಿದ್ದರೆ ನಿನ್ನ ಪ್ರೀತಿ ವ್ಯರ್ತವಾಗಿಬಿಡುವುದೇ? ಈ ಪ್ರೆಶ್ನೆಗೆ ಸರಿಯಾದ ಉತ್ತರ ಕಂಡುಕೊಳ್ಳಲ್ಲು ನನಗೆ ಸ್ವಲ್ಪ ಕಾಲಾವಕಾಶ ಬೇಕು.

ಕೆಲವೊಮ್ಮೆ ಅನಿಸುತ್ತದೆ, ಇಲ್ಲಿ ಯಾರು ಯಾರನ್ನು ಸಂಪೂರ್ಣವಾಗಿ ಪ್ರೀತಿಸಿಲ್ಲ, ಪ್ರೀತಿಸಲು ಸಾಧ್ಯವಿಲ್ಲವೆಂದು. ಪ್ರೀತಿಯಂಬುದು ಅಂದುಕೊಂಡಷ್ಟು ಕಷ್ಟದ ವಿಷಯವೇನಲ್ಲ. ಪ್ರೀತಿಯೊಂದಿಗೆ ಅಂಟಿಕೊಂಡಿರುವ ಆಸೆ, ಸ್ವಾರ್ಥವೆಂಬ ಪೆಡಂಭೂತಗಳೇ ಜೀವನವನ್ನು ಕಷ್ಟಮಯಗೊಳಿಸುವುದು.


Tuesday, 9 October 2018

ಚಹಾ ವಿರಾಮ [ಭಾಗ-೧]

ಇಂದು ಸಂಜೆ ಚಹಾ ವಿರಾಮದಲ್ಲಿ ನನ್ನ ಮತ್ತು ನನ್ನ ಸ್ನೇಹಿತೆ ಅಶ್ವಿನಿಯ ನಡುವೆ ನಡೆದ ಹಾಳು ಹರಟೆಯ ಕುರಿತು ತಲೆಯಲ್ಲಿ ಒಂದಷ್ಟು ವಿಷಯಗಳು ಹರಿದಾಡುತ್ತಿರುವಾಗ ಮೊದಲಿಗೆ ಅನಿಸ್ಸಿದ್ದು ಈ ವಿಷಯಗಳ ಮೇಲೆ ಒಂದಷ್ಟು ನನ್ನನಿಸಿಕೆಯ ಬೆಳಕ ಚೆಲ್ಲಬೇಕೆಂದು. ಸರಿ, ಹಾಗಾದರೆ ಬರೆಯೋಣವೆಂದು ಲ್ಯಾಪ್ಟಾಪ್ ತೆಗೆದು ಕುಳಿತೆ.
ಅರೇ ಮ್ಹಾರಾಯ್ರೆ, ಏನಿದು ವಿಪರಿಯಾಸ.? ಬರಿಯಬೇಕೆಂದಿರುವ ವಿಷಯಕ್ಕೆ ಶೀರ್ಷಿಕೆಯಾಗಿ ತಟ್ ಎಂದು ಬಂದ ಪದ, ಕಾಪಿ ಕಟ್ಟೆ.! ಆದರೆ ಈಗಾಗಲೇ ಕಾಪಿ ಕಟ್ಟೆಎಂದು ಹೆಸರಿಟ್ಟು ಜನರಿಗೆ ಕಾಪಿ, ಚಹಾ, ತಿಂಡಿ ತಿನಿಸುತ್ತಿರುವ ಹೋಟೆಲ್ ಗಳಿವೆ. ಹಾಗಾಗಿ ಈ ಹೆಸರನ್ನು ಬಳಸುವುದು ಬೇಡ ಎನಿಸಿತು. ಹಾಗಾದರೆ ಮತ್ತೇನು? ಸರಿ ಕಾಫಿ ಬ್ರೇಕ್ ಅಂದ್ಕೊಂಡೆ. ಇದರದ್ದು ಅದೇ ಹಣೆಬರಹ. ಯಾವುದು ಬೇಡ, ಕಟ್ಟೆ ಪುರಾಣ? ಹುಂ ಹು .. ಈ ಹೆಸರಿನೊಂದಿಗೆ ಈಗಾಗಲೇ ಒಂದಷ್ಟು ಫ್ಲರ್ಟಿಂಗ್ ಆಗಿದೆ. ಲಂಕೇಶ ಪತ್ರಿಕೆಯಲ್ಲಿ, ಬಯಲು ರಂಗಮಂದಿರದಲ್ಲಿ, ಸಿನಿಮಾಗಲ್ಲಿ! ಈಗಿನ್ನು ನನ್ನ ಬಳಿ ಉಳಿದಿರುವುದು ಒಂದೇ. ಚಹಾ ವಿರಾಮ. ಇದನ್ನು ಸಹ ಬಳಸಿ ಬೇಕಾದಷ್ಟು ವಿಷಯ ವಿಮರ್ಶೆಗಳು ನಡೆದಿರಬಹುದು. ನನಗದು ಗೊತ್ತಿಲ್ಲ. ಒಂದು ರೀತಿಯಲ್ಲಿ ಈ ಎಲ್ಲಾ ಶೀರ್ಷಿಕೆ ಇಲ್ಲಿ ಹೊಂದಾಣಿಕೆಯಾಗುತ್ತದೆ. ಮರಗಳ ಕೆಳಗಾಗೆ ಕಲ್ಲು ಬೆಂಚ್ಗಳ ಹಾಕಿರುವ ನಮ್ಮ ಡಿಪಾರ್ಟ್ಮೆಂಟ್ ಕ್ಯಾಂಟೀನ್ ನಲ್ಲಿ ನಾವು ಆಗಾಗ ಚಹಾ ವಿರಾಮಕೆಂದು ಹೋಗಿ, ಚಹಾ, ಕಾಪಿ ಕುಡಿಯುತ್ತ ಜಗತ್ತಿಲಿನ ಆಗುಹೋಗುಗಳ್ಳನ್ನು ನಮ್ಮಿಂದ ಏನು ಮಾಡಲಾಗದಿದ್ದರೂ ಬಡಿಯಿ ಕೊಚ್ಚಿಕೊಳ್ಳುತ್ತ, ಒಂದಷ್ಟು ಅವರಿವರ ಮೇಲೆ ದೂರು ಹಾಕುತ್ತ, ನಗುತ್ತ ಮಾತನಾಡಿ ಬರುತ್ತೇವೆ. ಇದೊಂತರ ಕೆಲಸದ ಒತ್ತಡಗಳ ನಡುವೆ ಮರಳುಗಾಡಿನ ಮದ್ಯಾಹ್ನದ ಉರಿಬಿಸಿಲನ್ನಲ್ಲಿ ಬೀಸಿ ಹೋಗುವ ತಂಗಾಳಿಯಂತೆ. ಹೇಳಬೇಕೆಂದರೆ ಲ್ಯಾಬ್ನಲ್ಲಿ ಕುಳಿತು ಕಲಿಯುವುದಕ್ಕಿಂತ ಹೆಚ್ಚೇ ವಿಷಯಗಳ ವಿನಿಮಯ ಈ ಚಹಾ ವಿರಾಮದಲ್ಲಿ ಆ ಕಲ್ಲು ಬೆಂಚ್ಗಳಲ್ಲಿ ನಡೆಯುತ್ತದೆ.




Thursday, 4 October 2018

ದಾವಣಗೆರೆ ಬೆಣ್ಣೆ ಮಸಾಲಾ ದೋಸೆ.

ಬೆಂಗಳೂರಿನಲ್ಲಿ ಸಿಗದ ತಿಂಡಿ ತಿನಿಸುಗಲ್ಲಿಲ್ಲ, ವಸ್ತುಗಳಿಲ್ಲ.
ಮಹಾನಗರಿ ಬೆಂಗಳೂರು ಸಂಚಾರ ದಟ್ಟಣೆಯ ಸಂದರ್ಭದಲ್ಲಿ ಮಹಾನರಕ ಹೊರತಾಗಿ ಮಿಕ್ಕೆಲ್ಲಾ ಸಂದರ್ಭದಲ್ಲೂ ಅದ್ಭುತ. ಎಲ್ಲಾ ರೀತಿಯ ಜನಕ್ಕೂ ಒಂದಲ್ಲಾ ಒಂದು ರೀತಿಯಲ್ಲಿ ಸ್ವರ್ಗ. ದೇಶ ವಿದೇಶದ ಯಾವುದೇ ಮೂಲೆಯಿಂದ ಬಂದರು ತನ್ನ ತೋಳ ತೆಕ್ಕೆಯಲ್ಲಿ ಜಾಗ ನೀಡುವ ಮಹಾ ತಾಯಿ.
ಹೇಳದೆ ಕೇಳದೆ ಆಗೊಮ್ಮೆ ಈಗೊಮ್ಮೆ ಧೋಯೆಂದು  ಸುರಿವ ಮಳೆ ಸಂಚಾರ ದಟ್ಟಣೆಯಲ್ಲೊಂದಷ್ಟು ಏರು ಪೇರು ಮಾಡಿದರು, ಬಹಳಾನೇ ಹಿತ ನೀಡುತ್ತತೆ. ನನ್ನ ಅದೃಷ್ಟ, ಈ ಮಹಾನಗರಿಯ ಮಾಡಿಲ್ಲಲ್ಲಿ ಅಲ್ಲಿ ಇಲ್ಲಿ ಉಳಿದುಕೊಂಡಿರು ಅರೆ ಬರೆ ಕುರ್ಚ್ಲು ಕಾಡನಲ್ಲಿ ವಾಸಿಸುದ್ದಿದ್ದೇನೆ (ಬೆಂಗಳೂರು ವಿಶ್ವವಿದ್ಯಾನಿಲಯ). ಇಲ್ಲಿ ಮಳೆ ಬಂದಾಗ ಸ್ವರ್ಗವೇ ಭೂಲೋಕಕ್ಕೆ ಇಳಿದಂತ ಅನುಭವವಾಗುತ್ತದೆ. ಕ್ಯಾಂಪಸ್ ಇಂದ ಸ್ವಲ್ಪ ಹೊರಗೆ ನಡೆದರೆ ಸಾಕು, ದೋಸೆ ಕಾರ್ನರ್ ಸಿಗುತ್ತದೆ. ಮಳೆಯಲ್ಲಿ ಕೊಡೆ ಹಿಡಿದುಕೊಂಡು ಅಲ್ಲಿಗೆ ಹೋಗಿ ಬಿಸಿ ಬಿಸಿ ದಾವಣಗೆರೆ ಬೆಣ್ಣೆ ಮಸಾಲಾ ದೋಸೆ ತಿಂದು, ಒಂದು ಸ್ಟ್ರಾಂಗ್ ಚಾ ಕುಡುಯುತ್ತಿದ್ದರೇ, ವ್ಹಾ, ಇನ್ನೇನ್ನು ಬೇಕು?
ಹಾನ್, ಇನ್ನೆನ್ನುಬೇಕೆಂದು ನನ್ನ ಕೇಳಿದರೆ, "ಈ ಮಳೆಯಲ್ಲಿ ಕೈ ಕೈ ಹಿಡಿದು ನಡೆಯುತ ಬಯಸದೆ ಇರುವಾಗ (ಅನಿರೀಕ್ಷಿತವಾಗಿ) ಗಲ್ಲದ ಮೇಲೊಂದು ಬಿಸಿ ಮುತ್ತ ನೀಡಲು ಗೆಳೆಯನೊಬ್ಬ ಬೇಕು/ ಅಥವಾ ನನ್ನ ಹಿಂದೆ ಹಿಂದೆ ಬರುವ ಒಂದು ಮುದ್ದಾದ ನಾಯಿ ಮರಿ ಬೇಕೆಂದು ಹೇಳಬಹುದೇನೋ!!"

ಒಂತರಾ ಲೈಫ್ ಸೂಪರ್ ಗುರು. 

Wednesday, 3 October 2018

ಸುತ್ತೋಣ ಬಾರ.

ಅದೆಷ್ಟೇ ಬಾರಿ ಕಾಡ ನೋಡ ಹೋದರು ಬೇಜಾರೆಂದು ಅನಿಸುವುದೇ ಇಲ್ಲ. ಸಮಯ ಸಿಕ್ಕಾಗಲೆಲ್ಲ ಈ ಕಲ್ಲು ಮಣ್ಣಿನ ಹಾದಿಯಲಿ ನಡೆದು ಹೋಗುವಾಸೆ. ಕಾಡಿನ ಮೌನವ ಬಿಗಿದಪ್ಪುವಾಸೆ. ಕಚಪಚ ಕಚಪಚ ಎಂದು ದಿನವಿಡೀ ಮಾತನಾಡುವ ಮನುಷ್ಯ, ಶಬ್ಧ ಮಾಡುವ ವಾಹನಗಳು, ಧೂಳು, ಹೋಗೆ, ಬಿಸಿಲು, ರಾಮರಾಮ. ಇದೆಲ್ಲದರಿಂದ ಆಗೊಮ್ಮೆ ಈಗೊಮ್ಮೆ ತಪ್ಪಿಸಿಕೊಂಡು ದೂರ  ಓಡಿಹೋಗುವಾಸೆ. ದಿನನಿತ್ಯದ ಜಂಜಾಟಕ್ಕೆ ಒಗ್ಗಿಹೋದ ನನಗೆ ಸಂಪೂರ್ಣವಾಗಿ ಇದನ್ನು ತೊರೆದು ಹೋಗಲು ಸಾಧ್ಯವಿಲ್ಲ, ಈ ಮಲಿನ, ಈ ಶಬ್ಧಗಳು ನನ್ನಲ್ಲಿ ಬೆರೆತು ಹೋಗಿವೆ. ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ಜೀವನದ ಮೇಲೆ ಎಷ್ಟೇ ಕೋಪವಿರಬಹುದು, ಆದರೆ ಪ್ರೀತಿಯು ಇದೆ. ಅಮ್ಮ ಅದೆಷ್ಟೋ ಬಾರಿ ನನಗೆ ಹೇಳುವುದಿದೆ, "ವಾರವಿಡೀ ಕೆಲಸ ಮಾಡಿ ಸುಸ್ತಾಗಿದೆ ಎಂದು ಹೇಳ್ತಿಯಲ್ಲ, ಶನಿವಾರ ಭಾನುವಾರ ಆರಾಮವಾಗಿ ಮಲಿಗಿ ವಿಶ್ರಮಿಸುವುದು ಬಿಟ್ಟು ಅಲ್ಲಿ ಇಲ್ಲಿ ಸುತ್ತುವುದಾದರೂ ಏಕೆ". ಅಮ್ಮನಿಗೆ ನಾನು ಅರ್ಥ ಮಾಡಿಸುವುದಾದರೂ ಹೇಗೆ? ನನಗೆ ಅದರ ಅವಶ್ಯಕತೆ ಎಷ್ಟಿದೆಯೆಂದು. 

ಹುಣ್ಣಿಮೆ

ಮುತ್ತು ೧.

ಮನದಲ್ಲಿಯೇ ಮುಚ್ಚಿಟ್ಟುಕೊಂಡ ಯಾವುದೋ ಹಾಡದು..
ಅದಕ್ಕೆ ಸಾಹಿತ್ಯದ ಗೋಜಿಲ್ಲ, ಸಂಗೀತದ ಅರಿವಿಲ್ಲ..
ಇದ್ದಕಿದ್ದಂತೆ ಅದಕ್ಕೆ ಹೊರಬರುವಾಸೆ..
ನಿಶಬ್ಧದದ ಹಾಡಾದ ಅವಳು ಒಂದು ವೇಳೆ ಹೊರಬಂದರು, ಯಾರಿಗಾದರೂ ಕೇಳಬಹುದೇ?
***************************
ಮುತ್ತು ೨.

ಅವನಿಗೆ ಮೊದಲಿನಿಂದಲೂ ಹಾಗೆಯೇ, ತಲುಪಬೇಕಾದ ಗುರಿಗಿಂತ ದಾರಿಯೇ ಇಷ್ಟ.
ಸ್ವರ್ಗದ ಹಾದಿಯಲ್ಲಷ್ಟೇ ಪಯಣ, ಅದುವೇ ಸ್ವರ್ಗ ಸುಖ.
***************************
ಮುತ್ತು ೩.

ಏನಾಗುತ್ತಿದೆ ಎಂಬ ಅರಿವಿಲ್ಲ.
ಒಬ್ಬರೊಳಗೊಬ್ಬರು ಕಳೆದುಹೋಗಿ, ಒಬ್ಬರನೊಬ್ಬರು ಹುಡುಕಿ ತರುವಾಸೆ.
ಆದರೆ ನಡುವಲ್ಲಿ ಅದ್ಯಾವುದ ತಿಳಿಯದ ಅಂತರ.
ಎಷ್ಟೇ ಸಮೀಪಕ್ಕೆ ಬಂದರು, ಒಬ್ಬರನೊಬ್ಬರು ಅಂಟಿಕೊಂಡಿದ್ದರು, ದೂರ ದೂರವಾಗಲೇ ಇಲ್ಲ.
ಭಹುಷಃ ಮನಸ್ಸು ಇದ್ಯಾವುದ್ದಕ್ಕಿನ್ನು ತಯಾರಾಗಿರಲ್ಲಿಲ್ಲ.
****************************
ಮುತ್ತು ೪.

ನನ್ನೊಳು ನಾನು ಬಂದಿ.
ರೆಕ್ಕೆ ಬಿಚ್ಚಿ ಹಾರಬೇಕಾದ ಮನಸ್ಸಿನ ಸುತ್ತ ಯೋಚನೆಗಳೆಂಬ ಬೇಲಿ ಹೆಣೆದು,
ನನ್ನೊಳು ನಾನು ಬಂದಿ.
ಯಾಕಿಷ್ಟು ಚಿಂತೆ? ಚಿಂತಿಸಿ ಗಳಿಸಿದ್ದಾದರೂ ಏನು?
ಈ ಪ್ರಶ್ನೆಗಳೇನು ತಾತ್ಕಾಲಿವಾಗಿ ಆಗೊಮ್ಮೆ ಈಗೊಮ್ಮೆ ಮೂಡಿದರು,
ಯೋಚನೆಗಳ ಬೇಲಿದಾಟಲು ಹಕ್ಕಿಯ ರೆಕ್ಕೆ ಇನ್ನು ಬಲಿತಿಲ್ಲ.
*************************
ಮುತ್ತು ೫.

ಎಲ್ಲಾ ಸುಂದರವಾದ ವಸ್ತುವಿನ್ನಲ್ಲೂ ಒಂದಲ್ಲ ಒಂದು ಕೊರತೆ ಇದ್ದೇ ಇರುತ್ತದೆಯಂತೆ,
ಸೌಂದರ್ಯಕ್ಕೆ ದೃಷ್ಟಿಯಾಗಬಾರದೆಂದಿರಬೇಕು !!
ಅದೊಂದು ಅದ್ಭುತ ಕ್ಷಣ,
ಅದ್ಭುತ ರಾತ್ರಿ,
ಹಾಲು ಬೆಳದಿಂಗಳು,
ದೈವೀಕ ಅನುಭವ,
ತೀರದ ಧಾಹ,
ಕಪ್ಪು ಮಚ್ಚೆ,
ವಾಸ್ತವತೆ ಹಾಗು ಕನಸಿನ ನಡುವಿನಲ್ಲೊಂದು ತೂಗುಯ್ಯಾಲೆ,
ಅರೆ ಕನಸು,
ಅರೆ ನನಸು,
ಪಯಣದ ಪೂರ್ಣವೆಲ್ಲ ಕಾಡಿದ ಒಂದೇ ಪ್ರಶ್ನೆ,
ಇದು ಕನಸೋ, ನನಸೋ?
ಪ್ರಶ್ನೆಗೆ ಉತ್ತರದ ಅವಶ್ಯಕತೆ ಬರಲೇ ಇಲ್ಲ.
ಅವನಿಗದು ಕನಸೆಂದೇ ನಂಬುವಾಸೆ.
ಅವನ ಆಸೆ ನನ್ನಾಸೆಗಿನ್ನ ಬಿನ್ನವಿದ್ದರೂ,
ಅವನಾಸೆಗೆ ಹುಂ ಗುಡುವುದು ನನಗೆ ಖುಷಿ,
ಕನಸುಗಳಿಲ್ಲದ ಜೀವನವೆಲ್ಲಿ?
ಕನುಸುಗಳ್ಳನ್ನೇ ಜೀವಿಸೋನನಗೆ,
ಜೀವಿಸಿದ ಕ್ಷಣವೆಲ್ಲವು ಒಂದು ರೀತಿಯಲ್ಲಿ ಕನಸೇ ಅಲ್ಲವೇ?
***********************
ಮುತ್ತು ೬.

ಅದೇನೋ ಚಡಪಡಿಕೆ, ಆತುರ,
ಗಡಿಯಾರದ ಮುಳ್ಳುಗಳ ಬೆನ್ನನ್ನೇರಿ ಅವುಗಳ ಹಿಂದೆ ಹಿಂದೆ ಚಲಿಸುತ್ತ ಎಲ್ಲಾ ದಿಕ್ಕನ್ನು ನೋಡಿಬಂದೆವು.
ಒಮ್ಮೆ ಮೇಲೆ, ಒಮ್ಮೆ ಕೆಳಗೆ, ಒಮ್ಮೆ ಬಲಕ್ಕೆ, ಒಮ್ಮೆ ಎಡಕ್ಕೆ ....
ಹಗಲು ಕತ್ತಲಾಯಿತು, ಕತ್ತಲೋಗಿ ಹಗಲು.
***********************
ಮುತ್ತು ೭.

ನನ್ನ ಸ್ನೇಹಿತನೊಮ್ಮೆ ಹೇಳಿದ ಅಲ್ಲಮಪ್ರಭುರವರ ಪದ್ಯವಿಲ್ಲಿ ನೆನಪಿಗೆ ಬರುತ್ತಿದ್ದೆ.
"ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ."
**************************
ಮುತ್ತು ೮.

ಒಂದೊಂದು ಮುತ್ತನ್ನು ಜೊಪ್ಪನಾವಾಗಿ ಪೋಣಿಸಿ,
ಹಾರಾಒಂದರ ಹೆಣೆದು,
ಕೊರಳಿಗೆ ಮಾಲೆಮಾಡಿ ಹಾಕಿಕೊಲ್ಲಲ್ಲೇ?
***************************

ಜೀವನದ ಕಡೆಯ ಘಟ್ಟದೊರೆಗು ಈ ಸವಿ ಸಿಹಿ ನೋವ ನೆನಪ ಹೊತ್ತೊಯುವಾಸೆ.
ಮುತ್ತಿನ ಮಾಲೆ ಹಗುರಾಗಿದ್ದಷ್ಟು ಪಯಣಕ್ಕೆ ಒಳ್ಳೆಯದು.