Tuesday, 26 September 2017

ಆದತ್

ಯಾವುದೇ ಅಭ್ಯಾಸವನ್ನಾಗಲಿ ಬದಲಾಹಿಸಬಹುದು, ಅವು ನಿಮ್ಮನು ಬದಲಾಯಿಸುವಮುನ್ನ;ಮತ್ತೆಯೂ !!

Wednesday, 20 September 2017

ಕಪ್ಪು ಕಸ್ತೂರಿ!

ಎಲ್ಲಾ ಬಣ್ಣವ ಮಸಿ ನುಂಗಿತ್ತು,
ನಮ್ಮಪ್ಪ ಹೇಳಿಕೊಟ್ಟ ಮತ್ತೊಂದು ಪಾಠ.
ಒಲೆಯಲ್ಲಿ ಅಡಿಗೆ ಮಾಡೊ ಕಾಲ ಯಾವಾಗ್ಲೋ ಹೊಯ್ತಪ್ಪ, ನಮ್ಮ ಕಾಲದಲ್ಲಿ ಯಾವ ಪಾತ್ರೆಗೂ ಮಸಿಯೆಲ್ಲಾ ಆಗಲ್ಲ. ಅದ್ರಲ್ಲೂ, ನಾನಂತೂ ಈ ಮಸಿಗೆ ಅಷ್ಟೆಲ್ಲಾ ಅವಕಾಶಕೊಡೋದಿಲ್ಲ ನನ್ನ ಜೀವನದ ಬಣ್ಣನ ನುಂಗಿಹಾಕಕ್ಕೆ, ಅಂದಿದ್ದೆ.

ಹೌದ?  

ನಾನು, ಎಲ್ಲರಂತೆಯೆ ಸಾಮಾನ್ಯ ವ್ಯಕ್ತಿ.
ಅರಿವಾಯ್ತು.

ಒಂದು ಬಿಂದು ಹುಳಿ ನೀರು ಸಾಕು, ಹಾಲು ಒಡೆಯಲು.
ಒಂದು ಕೆಟ್ಟ ಕ್ಷಣ ಸಾಕು ಸಾವಿರ ಒಳ್ಳೆ ಕ್ಷಣಗಳ ಮರೆಸಲು.

ಅಶನ ಬೆಂದಿದೆಯೆ ನೋಡಲು ಒಂದು ಅಗುಲು ಪರೀಕ್ಷಿಸಿದರೆಸಾಕು.

ಮೊತ್ತೊಮ್ಮೆ ಅಪ್ಪನ ಮಾತು ಸತ್ಯ ಸಾಭೀತಾಯಿತು.
ಎಲ್ಲಾ ಬಣ್ಣವ ಮಸಿ ನುಂಗಿತ್ತು...
😐😐😓😢😢😢😢😢😢😢😢😢😢😢😩😥

Tuesday, 19 September 2017

ಮರುಳ ಮನಸ್ಸೇ!

ಇನಿಯನ ಸಂದೇಶವೊಂದು ಬಂದಿತ್ತು.
ಯುಗದ ನೋವು ಕ್ಷಣದಿ ದೂರಾಯ್ತು.
ಮಾಡಿದ ತಪ್ಪಿಗೆ, ಮಗುಮನದ ಆ ನಗೆ ಕಂಡು, ಕ್ಷಮೆ ಮೂಡಿತ್ತು.
ಮರಳು ಮನಸ್ಸು ಮತ್ತೆಮ್ಮೆ ಮರುಳಾಗಿತ್ತು. 

Monday, 18 September 2017

ಪ್ರಶ್ನೆಯೇ? ಗೊತ್ತಿಲ್ಲ.

ಕಾರ್ಮೋಡ.
ಎಲ್ಲೆಡೆ ಕತ್ತಲು.
ಮಳೆಯಾದೀತೆ?
ನೋವ ಮರೆಸೀತೆ?
ಗಾಳಿಯದೆ ಚಿಂತೆ.
ನೋವ ದೂರ ಕೊಂಡೊಯ್ಯುವ ನೆಪದಲ್ಲಿ ಮಳೆಯ ತಡೆದೀತೆ?
ಸಂಶಯ.
ಒಂದು ವೇಳೆ ಮಳೆಯೂ ಇಳೆಯ ಸೇರಿದರೆ?
ಮತ್ತೊಂದು ಸುಂದರವಾದ ಪಾಪಸ್ಕಳ್ಳಿಯು ಚಿಗುರೊಡೆದೀತೆ ? ಹೂ ಅರಳಿತೇ?
ಗೊಂದಲ.
ಕಡೆಯಿಲ್ಲದ ಗೊಂದಲ.
ಸರಿತಪ್ಪುಗಳ ಎಲ್ಲೇ ಮೀರಿ.
ಬೇರ್ಪಡಿಸಲಾಗದ ಬಣ್ಣಗಳು.
ಬಿಳಿಯ ಹಾಳೆ.
ಬೇರಾವುದೋ ಲೋಕ.
ಒಬ್ಬಳೇ ನಾನ್ಲಿಲ್ಲಿ.
ಹೆಚ್ಚೇನ ಹೇಳಲಾರೆ.
ಅಮ್ಮ ಮಾಡಿಕೊಟ್ಟ ಚಹಾಗಿಂದು ಮೋಸ ಮಾಡಿದೆ. ಅದೀಗ ತಣ್ಣಗಾಗಿದೆ.
ಸುತ್ತಲೂ ತಣ್ಣನೆಯ ವಾತಾವರ್ಣ.
ಮಂಜುಗಡ್ಡೆಯ ಮನುಸುಗಳು.
ಕಲ್ಲು.
ಹೃದಯ ಬಡಿತವಿಲ್ಲ.
ಬೆಚ್ಚನೆಯ ಭಾವವಿಲ್ಲ.
ಮಾನವೀಯತೆ?
ಅವಳೊಂದು ಮುದ್ದು ಯಕ್ಷಿಣಿ.
ಚಳಿಗೆ ಬೆಚ್ಚಗೆ ಹೊದೆದು ಮಲಗಿ ವರ್ಷಗಳಾಗಿವೆ.
ಹೋದಕೆಯ ಮೇಲೆ ಮಂಜಿನ ರಾಶಿ.
ಶಿಥಿಲ.
ನಿಶಬ್ಧ.
ಅಯ್ಯೋ. ಮತ್ತೆ ಮತ್ತೆ ಕಾಡುತಿಹ ಪ್ರಶ್ನೆ!?

ಕೊನೆಯೆಲ್ಲಿ ?
ಕೂತು ಮಾತಾಡಬೇಕಿದೆ.
ಯಾರಿಹರಿಲ್ಲಿ?
ಕನ್ನಡಿಯು ಇಲ್ಲ.
ಮಳೆಯೂ ಇಲ್ಲ.
ನೀರು ಹಿಂಗಿದ ಬರಡು ನೆಲ.
ಜೊತೆಯಲ್ಲಿ ನನ್ನ ಕಿವುಡು ಕಿವಿ.

ಸಾಕಾಯ್ತು.








 




ಮಳೆಬರುವ ಮುನ್ಸೂಚನೆ

 ಇಂದು:


ಹೇಳಲು ಸಾಕಷ್ಟಿವೆ.
ಆದರೆ ಮೂಗಿ ನಾನು.
ಮಗುವಂತೆ 'ಅತ್ತು'ಬಿಡಲೇ'?
ಮಗುವಿನಂತೆ 'ಅಳು'ವೆನೋ ಬರುತಿದೆ, ಆದರೆ ಈ ಮೋಹ ಪಾಶವ 'ಬಿಡಲು' ಸಾಧ್ಯವೇ?

ಅಪ್ಪ ಹೇಳಿಕೊಟ್ಟ ಪಾಠ ನನಗೆ ಅರ್ಥವಾಗಿದ್ದರು, ಕಲಿಯಲಾಗಲಿಲ್ಲ.

"be connected to everything, never get attached"

Saturday, 16 September 2017

ಕಥೆಯಲ್ಲ ಜೀವನ ಸಿ.೧, ನಮ್ಮಮ್ಮ -ಎಪಿ.೧

ಯಾರದ್ದು ತಪ್ಪು?  
ಇಲ್ಲಿ ಯಾರದ್ದು ತಪ್ಪಿಲ್ಲ. ಹೌದು.
ತಾಯಿ ಮಕ್ಕಳ್ಳ ಸಂಬಂಧವೇ ಹಾಗೆ.

ಓದುಗರಿಗೆ ಸೂಚನೆ: ಒಂದಕೊಂದು ಬೆಸೆಯುವ ಪ್ರಯತ್ನ ಬೇಡ.
ಬೇರೆ ಬೇರೆ ಫ್ಲೇವರ್ ಪೇಸ್ಟ್ರೀಸ್ ಇವು.

👉ಮನೆಗೆ ತಲುಪಿದ ಕೂಡಲೇ ಅಪ್ಪನ ಹತ್ತಿರ ಕೇಳುವ ಮೊದಲ ಪ್ರಶ್ನೆ,
ಏನ್ ಭಟ್ರೇ, ಅಮ್ಮ ಯೆಲ್ಲಿ ?
ಈ ಪ್ರಶ್ನೆ ಏಕೆ ಕೇಳಿದೆ ಅನ್ನುವದ್ದಕ್ಕೆ ಉತ್ತರವಿಲ್ಲ.

👉ನಮ್ಮಪ್ಪ ಅವಾಗವಾಗ ನನಗೆ ಹೇಳುವುದುಂಟು,
'ತಾಯಿಯ ಕಂಡರೆ ತಲೆ ನೋವು.'
ಇದಕ್ಕೆ ಬೇಕಾದಷ್ಟು ಅರ್ಥಕಲ್ಪಿಸಬಹುದು. ಅವರವರ ಭಾವಕ್ಕೆ ತಕ್ಕಂತೆ, ಸಂದರ್ಭಕ್ಕೆ ತಕ್ಕಂತೆ.
ನನ್ನ ಮತ್ತು ಅಪ್ಪನ ಭಾವಕ್ಕೆ ತಕ್ಕಂತೆ ಹೇಳುವುದಾದರೆ, ಈ ಗಾದೆಗೆ ಎರೆಡು ಅರ್ಥ,
ಮೊದಲನೆಯದು,
ಅಮ್ಮನ ಕಂಡ ಕೂಡಲೇ ಇಡೀ ದಿನದ ಕಥೆ ಉರುಗುತ್ತೇನೆ, ಜೊತೆಯಲ್ಲಿ ಅಮ್ಮ ಅಲ್ಲಿ ನೋವು ಇಲ್ಲಿ ನೋವ, ಸುಸ್ತಾಯ್ತು ಅಂತ ಬೇರೆ ಒಂದಷ್ಟು ವದರುತ್ತೇನೆ. ಆಗ ಅಪ್ಪ 'ತಾಯಿಯ ಕಂಡರೆ ತಲೆ ನೋವು' ನನ್ನ ಮಗಳಿಗೆ ಅಂತಾರೆ. 😅😆... ನಮ್ಮಪ್ಪನ ಸಾರ್ಕ್ಯಾಸ್ಮ್ ಸಹಿಸುವುದು ಅಷ್ಟು ಸುಲಭದ ಮಾತಲ್ಲ.
ಮತ್ತೊಂದೂ..... ಬಿಡಿ ಬೇಡ. ಹೇಳೊದುಕ್ಕು ಕೇಳೊದುಕ್ಕು ಇದೊಂದು ವಿಷಯವೇ ಅಲ್ಲ.

👉 'ಬಾಯಿಗಡ್ಡ ಬಾಲೆಲು', ಮತ್ತೊಂದು ಡೈಲಾಗ್, ಅಯ್ಯೋ ಬಿಡಿ ನಮ್ಮಪ್ಪನ ಬಿಟ್ಟು ಬೇರೆ ಯಾರ್ತನೆ ಗಾದೆಗಳಲ್ಲಿ ನನ್ನಜೊತೆ ಮಾತಾಡ್ತಾರೆ?
ಇದು ತುಳು ಭಾಷೆಯಲ್ಲಿದೆ.  ನಮ್ಮಪ್ಪ ಈ ನುಡಿಮುತ್ತುನ್ನ ಉದುರಿಸುವುದು ಯಾವಾಗ? , ಕೇಳ್ರಿ ಹೇಳ್ತೀನಿ.
ಬ್ರಾಹ್ಮಣ ಕುಟಂಬಕ್ಕೆ ಸೇರಿದ ನಮ್ಮಮ್ಮ , ಶ್ರದ್ಧೆ, ಭಕ್ತಿಗೆ ನಮ್ಮ ಮನೆಯಲ್ಲೇ ವರ್ಲ್ಡ್ ಫೇಮಸ್. ಆಚಾರವಂತರು, ವಿಚಾರವಂತರು. ಕೊಳೆ, ಮೈಲಿಗೆ, ಶುದ್ಧ ಈ ಪದಗಳಿಗೆ ನಮ್ಮ ಎಡಬಿಡಂಗಿತನದ (so called my rationalism) ಧೂಳುತಾಕಿ ದಮ್ಮುಕಟ್ಟುವಾಗ ನಮ್ಮಮ್ಮ ಉಸಿರು ದಾನ ಮಾಡಿ ಅವುಗಳನ್ನು ಜೀವಂತವಾಗಿರಿಸಿಕ್ಕೊಳ್ಳುತ್ತಾರೆ.
ಅದೇನೋ ಗೊತ್ತಿಲ್ಲ, ನಮ್ಮಮ್ಮನ ಊಟದ ತಟ್ಟೆಯಲ್ಲಿ ಇರುವ ಕುಸುಗಲಿಕ್ಕಿಯ ಪದಾರ್ಥವಾಗಲಿ (ಹವ್ಯಕ ಭಾಷೆಯಲ್ಲಿ ಪದಾರ್ಥವೆಂದರೆ ಸಾಂಬಾರ್, ಪಲ್ಯ ಹೀಗೆ... ) ಅಥವಾ ಬೇರೆ ಯಾವುದೇ ತಿಂಡಿ ತಿನಿಸಾಗಲಿ ಒಂದು ನಮೂನೆ ಯಮ್ಮಿಯಾಗಿ ಕಾಣಿಸುತ್ತದೆ. ಟ್ರಸ್ಟ್ ಮೀ, ಇದು  ಸತ್ಯ. ನಾನಾಗಿಯೇ ಮಿಶ್ರಮಾಡಿದ ಅಶನ ಪದಾರ್ಥಗಳ ಪಾಕ ಅಷ್ಟು ಚೆಂದ ಹಾಗು ರುಚಿಕರವಾಗಿ ಕಾಣುವುದಿಲ್ಲ. ಹಾಗಾಗಿ ಯಾವಾಗಲು ಅಮ್ಮನ ತಟ್ಟೆಯಿಂದ ನನಗೆ ಊಟ ಬೇಕು, ಕೇಳುತ್ತೇನೆ. ಆಗಲೇ ನಮ್ಮಪ್ಪನ ಡೈಲಾಗ್ ಬರೋದು. ಬಾಯಿಗಡ್ಡ ಬಾಲೆಲು, ಅಂದ್ರೆ ತಿನ್ನುವ ತುತ್ತಿಗೆ ಮಕ್ಕಳು ಅಡ್ಡ ಬರ್ತಾರೆ ಅಂತ. ನೀವೇ ಹೇಳಿ ಇದ್ರಲ್ಲಿ ನನ್ನ ತಪ್ಪೇನಾದ್ರು ಇದಿಯಾ? ನಾನು ಎಷ್ಟು ಮುಗ್ದೆ. ಹಾಹಾ :)

ಮುಂದುವರಿಯಲಿದೆ..... 








Wednesday, 13 September 2017

ಅಚ್ಚಾ!

ಅಚ್ಚಾ! - ದೀಪಕ್ ಪ್ರತಿಕ್ರಿಯಿಸಿದ.

(ಕೆಲವು ಕ್ಷಣಗಳ ನಿಶಬ್ಧ, ಯಾವುದೋ ಯೋಚನಾಲಹರಿಯಲ್ಲಿ ತೇಲಿಹೋದಂತೆ.. ಕಳೆದ ಎರೆಡು ತಿಂಗಳುಗಳಲ್ಲಿ ನಡೆದ ಎಲ್ಲಾ ನೆನಪುಗಳು ಕಣ್ಣಮುಂದೆ ಹಾಗೆ ಸುಳಿದು ಹೋದವು. ನೆನಪುಗಳೇ ಹಾಗೆ ನೆನಪಾಗುತ್ತಲೇ ಇರುತ್ತದೆ. ಮತ್ತೊಮ್ಮೆ ಕಳೆದು ಹೋದ ಸಮಯವನ್ನು ಹುಡಿಕಿ ಚೀಲ್ಲಕ್ಕೆ ತುಂಬಿಸಿ ಹೊತ್ತು ತರುತ್ತದೆ. ಒಂದು ನೆನಪಿನ ಜೊತೆ ಮಿಳಿತಗೊಂಡ ನೂರಾರು ನೆನಪುಗಳು. ಸಾಲು ಸಾಲು ನೆನಪುಗಳು. ಸುಂದರ ನೆನಪುಗಳು. ದುಃಖವೆಂದರೆ ಈ ರೀತಿಯ ಇನ್ನೊಂದಷ್ಟು ನೆನಪುಗಳ ಬುತ್ತಿ ಕಟ್ಟಲು ನಮ್ಮಿಬ್ಬರ ನಡುವೆ ಮೊದಲಿನಂತ ಸ್ನೇಹ ಉಳಿದಿಲ್ಲ.)

Wakad Pune,
೦೯/೦೯/೨೦೧೭.

ಕೆಲವು ಗಂಟೆಗಳ ಹಿಂದೆಯಷ್ಟೇ ನನ್ನ ಸಂಚಾರಿ ದೂರವಾಣಿಯನ್ನು ಕಳೆದುಕೊಂಡಿದ್ದೆ.
IISER ಅಲ್ಲಿ ಯಾವುದೊ ಕೆಲ್ಸದ ಮೇಲೆ ಪೂನೆಗೆ ಬಂದಿದ್ದೆ. ಮಹಾರಾಷ್ಟ್ರಕ್ಕೆ ಹೊರಡಬೇಕೆಂದಕೂಡಲೇ ನೆನಪಾದದ್ದು ಅಭಿ. (ಹೆಸರನ್ನು ಬದಲಾಯಿಸಿದ್ದೇನೆ).
ಮೊದಲೇ ನಿರ್ಧರಿಸಿದಂತೆ ಅರುಣನ ಸ್ನೇಹಿತ ದೀಪಕ್ ನನ್ನನ್ನು ಅವನ ಸಹೋದ್ಯೋಗಿ ರಾಧಾಳ ಮನೆಗೆ ಕರೆದುಕೊಂಡು ಹೋದ. ಅವನು ತನ್ನ suzuki access 125 ತಂದಿದ್ದ. ಅದನ್ನು ನೋಡಿಯೇ ಅಭಿಯ ನೆನಪು ಕಾಡಿತ್ತು. ದೀಪಕ್ನ ಕುಶಲೋಪರಿ ಯನ್ನು ವಿಚಾರಿಸುತ್ತಾ ನಮ್ಮ ಪಯಣ ಸಾಗಿತ್ತು. ನನ್ನ ಯಾವೊದೊ ಉತ್ತರಕ್ಕೆ, ಪ್ರತಿಕ್ರಿಯಿಸುತ್ತಾ 'ಅಚ್ಚಾ' ಎಂದ.

'ಅಚ್ಚಾ', ಕೇವಲ ಒಂದು ಸಾಮಾನ್ಯ ಪದ. ಮಹಾರಾಷ್ಟ್ರದಲ್ಲಿ ಸರ್ವೇಸಾಮಾನ್ಯ...

ಈ ಸಣ್ಣ ವಿಷಯವು ಯಾರದೋ ನೆನಪು ತರಿಸಲು ಸಾಧ್ಯವೇ? ಈಕೆಗೇನು ಹುಚ್ಚೇ ಎನಿಸಬಹುದು.
(It maybe nothing for others, but everything for some.)
ನಮ್ಮವರು ಅನಿಸಿದವರ ಸಣ್ಣ ಸಣ್ಣ ವಿಷಯವು ನಮಗೆ ಹೆಚ್ಚೇ. ಎಲ್ಲಾ ಸಣ್ಣ ವಿಷಯಗಳಲ್ಲೂ ತನ್ನದೆಯಾದ ಸುಖದುಃಖ್ಖ ಒಳಗೊಂಡಿರುತ್ತದೆ. ಎಲ್ಲೆಡೆ ತನ್ನ ಛಾಪ ಮೂಡಿಸುತ್ತದೆ.

ಇದೊಂದು ಕೇವಲ ನಿದರ್ಶನವಷ್ಟೇ. ಇಂತಹ ಎಷ್ಟೋ ವಿಷಯಗಳು ದಿನ ನಿತ್ಯ ಕಾಡುವುದುಂಟು.

ಮೊಗದಲ್ಲೊಂದು ಸಣ್ಣ ನಗು ಮೂಡಿಸುವುದುಂಟು. ಮನದಲ್ಲಿ ಸಾವಿರ ನೆನಪುಗಳು ಸುಳಿದು ಹೋಗುವುದುಂಟು.